ಕೆ.ಆರ್.ಪುರ: ‘ಕೊರೊನಾ ಸೋಂಕಿನಿಂದ ಎದುರಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನುಡಿ.ಕೆ.ಶಿವಕುಮಾರ್ ಅವರುರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಆರೋಪಿಸಿದ್ದಾರೆ.
ಕ್ಷೇತ್ರದ ಮಾರುಕಟ್ಟೆಗೆಶುಕ್ರವಾರ ತಡರಾತ್ರಿ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್, ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ‘ಮಧ್ಯರಾತ್ರಿ ಅವರು ಕೆ.ಆರ್.ಪುರಕ್ಕೆ ಬರುವಂತಹ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.
‘ಸಾವಿರಾರು ರೈತರು ಮಾರುಕಟ್ಟೆಯಲ್ಲಿ ಸೇರುವುದರಿಂದ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಹೇಳಿರುತ್ತಾರೆ. ಅದನ್ನೇ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಸರಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಯಡಿಯೂರಪ್ಪ ನೇತೃತ್ವದ ಸರ್ಕಾರ ರೈತರ ಅಭಿವೃದ್ಧಿಗೆ ಮಹತ್ವ ನೀಡುತ್ತಿದೆ. ರೈತರಿಂದ ನೇರವಾಗಿ ತರಕಾರಿ ಖರೀದಿ ಮಾಡಲಾಗುತ್ತಿದೆ.ಬಿಜೆಪಿ ಸರ್ಕಾರ ಕೊರೊನಾ ಪರಿಸ್ಥಿತಿಯನ್ನು ಒಗ್ಗಟ್ಟಾಗಿ ಎದುರಿಸುತ್ತಿದೆ. ಆದರೆ, ಡಿ.ಕೆ ಶಿವಕುಮಾರ್ ಅವರು ಉದ್ದೇಶಪೂರ್ವಕವಾಗಿ ಪಿತೂರಿ ನಡೆಸುತ್ತಿದ್ದಾರೆ’ ಎಂದು ದೂರಿದ್ದಾರೆ.
ಇದೇ ವೇಳೆ ಕೆ.ಆರ್.ಪುರ ಸಮೀಪದ ಬಿವಿಎನ್ಎಚ್ಎಸ್ ಶಾಲೆ ಆವರಣದಲ್ಲಿ ಬಿಜೆಪಿ ಮುಖಂಡ ಚನ್ನಕೇಶವ ನೇತೃತ್ವದಲ್ಲಿ ಸಾರ್ವಜನಿಕರಿಗೆ ಹತ್ತು ಸಾವಿರ ತರಕಾರಿ ಕಿಟ್ಗಳನ್ನು ಬೈರತಿ ಬಸವರಾಜ್ ವಿತರಿಸಿದರು.
ಬಿಜೆಪಿ ಮುಖಂಡ ದೇವಸಂದ್ರದ ಚನ್ನಕೇಶವ ಮಾತನಾಡಿ, ‘ಜನರಿಗೆ ನೆರವಾಗುವ ಉದ್ದೇಶದಿಂದಚಿಕ್ಕಬಳ್ಳಾಪುರ ಮತ್ತು ಕೋಲಾರದ ರೈತರಿಗೆ ಮುಂಗಡ ಹಣ ನೀಡಿ ತರಕಾರಿಗಳನ್ನು ಖರೀದಿಸಿದ್ದೇವೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಡ ಜನರಿಗೆ ತರಕಾರಿ ವಿತರಿಸುತ್ತಿದ್ದೇವೆ’ ಎಂದು ಹೇಳಿದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬಿಜೆಪಿ ಯುವ ಮುಖಂಡ ಚನ್ನಕೇಶವ, ಪಾಲಿಕೆ ಸದಸ್ಯರಾದ ಜಯಪ್ರಕಾಶ್, ಶ್ರೀಕಾಂತ್, ಮಾಜಿ ಪಾಲಿಕೆ ಸದಸ್ಯ ಅಂಥೋನಿಸ್ವಾಮಿ ಇದ್ದರು.