ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಕಾರ್ತಿಕೇಯನ್ (40) ಎಂಬುವವರನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದ್ದು, ಹಣಕಾಸು ವಿಚಾರಕ್ಕೆ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
‘ಆರ್.ಎಸ್. ಪಾಳ್ಯದ ಕಾರ್ತಿಕೇಯನ್, ರಿಯಲ್ ಎಸ್ಟೇಟ್ ಉದ್ಯಮಿ. ಅವರು ತಮ್ಮ ಮನೆ ಸಮೀಪದಲ್ಲಿ ಮಂಗಳವಾರ ರಾತ್ರಿ ವಾಯುವಿಹಾರ ಮಾಡುತ್ತಿದ್ದರು. ಬೈಕ್ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಬಾಣಸವಾಡಿ ಠಾಣೆಯ ರೌಡಿ ಪಟ್ಟಿಯಲ್ಲಿ ಕಾರ್ತಿಕೇಯನ್ ಹೆಸರಿತ್ತು. ನ್ಯಾಯಾಲಯದ ಆದೇಶದಂತೆ ರೌಡಿಪಟ್ಟಿಯಿಂದ ಹೆಸರು ಕೈಬಿಡಲಾಗಿತ್ತು. ಅಪರಾಧ ಕೃತ್ಯಗಳಿಂದ ದೂರವಾಗಿದ್ದ ಕಾರ್ತಿಕೇಯನ್, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಕೆಲ ಜಾಗಗಳು ಹಾಗೂ ಹಣಕಾಸು ವಿಚಾರಕ್ಕೆ ಹಲವರ ಜೊತೆ ವೈಷಮ್ಯ ಬೆಳೆದಿತ್ತು.’
‘ಇತ್ತೀಚೆಗೆ ಕೆಲವರಿಗೆ ಕಾರ್ತಿಕೇಯನ್ ಬೆದರಿಕೆಯೊಡ್ಡಿದ್ದರು ಎಂದು ಗೊತ್ತಾಗಿದೆ. ಅದೇ ಕಾರಣಕ್ಕೆ ಎದುರಾಳಿ ತಂಡದವರು, ಕಾರ್ತಿಕೇಯನ್ ಅವರನ್ನು ಕೊಲೆ ಮಾಡಿರುವ ಅನುಮಾನವಿದೆ’ ಎಂದು ಪೊಲೀಸರು ತಿಳಿಸಿದರು.