ಬೆಂಗಳೂರು: ರಾಜ್ಯದ ‘ಆಡಳಿತ ಶಕ್ತಿ ಕೇಂದ್ರ’ಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಮತ್ತು ವಿಶ್ವೇಶ್ವರಯ್ಯ ಕಟ್ಟಡಗಳಿಗೂ ಬಂದ್ ಬಿಸಿ ತಟ್ಟಿತ್ತು.
ಚಟುವಟಿಕೆಯಿಂದ ನಿತ್ಯ ಗಿಜಿಗುಡುವ ಈ ಎಲ್ಲ ಕಟ್ಟಡಗಳು ಸೋಮವಾರ ಬಿಕೋ ಎನ್ನುತ್ತಿದ್ದವು. ಸಾರಿಗೆ ವ್ಯವಸ್ಥೆ ಇಲ್ಲದೆ ಸರ್ಕಾರಿ ಕಚೇರಿಗಳತ್ತ ಬರಲು ಸಾಧ್ಯವಾಗದ್ದರಿಂದ ಸಿಬ್ಬಂದಿ ಕೊರತೆ ಕಂಡುಬಂತು.
ಮೆಟ್ರೊ ರೈಲು ಸಂಚಾರ ಎಂದಿನಂತೆ ಇದ್ದುದರಿಂದ ಅದನ್ನು ಬಳಸಿಕೊಂಡು ಬಂದ ಸಿಬ್ಬಂದಿ ಹೊರತುಪಡಿಸಿದರೆ, ಉಳಿದಂತೆ ಬಹುತೇಕ ಸಿಬ್ಬಂದಿ ಗೈರಾಗಿದ್ದರು. ಕೆಲವರು ಸ್ವಂತ ವಾಹನಗಳ ಮೂಲಕ ಬಂದರು.
ಸಾಮಾನ್ಯವಾಗಿ ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಅಧಿಕಾರಿಗಳನ್ನು ಭೇಟಿ ಮಾಡಲು ನಿತ್ಯ ನೂರಾರು ಜನ ಬರುತ್ತಾರೆ. ಆದರೆ, ಸಾರಿಗೆ ವ್ಯವಸ್ಥೆ ಸ್ಥಗಿತವಾಗಿದ್ದರಿಂದ ಜನರ ಓಡಾಟ ತೀರಾ ವಿರಳವಾಗಿತ್ತು.