ಬೆಂಗಳೂರು: 'ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಮಾಸ್ಕ್ ನೀಡಬೇಕು ಹಾಗೂ ಸೂಕ್ತ ಭದ್ರತೆ ನೀಡಬೇಕು' ಎಂದು ಆಗ್ರಹಿಸಿ ಪೌರ ಕಾರ್ಮಿಕರು ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು, 'ಸುರಕ್ಷಾ ಕವಚ ನೀಡಬೇಕು. ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಸಿಲುಕಿರುವ ಕಾರ್ಮಿಕರು ಕೆಲಸಕ್ಕೆ ಬಾರದಿದ್ದರೆ, ಅವರಿಗೆ ಪೂರ್ತಿ ಸಂಬಳ ನೀಡಬೇಕು. ಸಂಬಳವನ್ನು ನೇರವಾಗಿ ಕಾರ್ಮಿಕರಿಗೆ ಪಾವತಿ ಮಾಡಬೇಕು' ಎಂದು ಆಗ್ರಹಿಸುತ್ತಿದ್ದಾರೆ.
'ಕೊರೊನಾ ಬಂದಾಗಿನಿಂದ ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುತ್ತಿದ್ದೇವೆ. ಮೂಲ ಸೌಕರ್ಯವೂ ನಮಗಿಲ್ಲ. ಕುಡಿಯುವ ನೀರು ಸಹ ಮನೆಯಿಂದ ತರುತ್ತಿದ್ದೇವೆ' ಎಂದು ಕಾರ್ಮಿಕ ಮಹಿಳೆ ಲಕ್ಷ್ಮಿ ಅಳಲು ತೋಡಿಕೊಂಡರು.