ಬೆಂಗಳೂರು: ಜೆ.ಪಿ ನಗರದ ಪುಟ್ಟೇನಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ ತಂಡದವರು ಯಕ್ಷಗಾನವನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮ ಆಯೋಜಿಸಿದ್ದರು.
ತಂಡದ ಮುಖ್ಯಸ್ಥೆ ಕೆ.ಗೌರಿ ಅವರು ಯಕ್ಷಗಾನದ ವೇಷ ಭೂಷಣಗಳ ಪರಿಚಯ, ಕಥಾ ಪ್ರಸಂಗಗಳ ಆಯ್ಕೆ ವಿಧಾನ, ಭಾಗವತಿಕೆ, ಬಳಸುವ ವಾದನಗಳು ಹೀಗೆ ಯಕ್ಷರಂಗದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ವಿದ್ಯಾರ್ಥಿಗಳು, ಶಿಕ್ಷಕರ ಪ್ರಶ್ನೆಗಳಿಗೆ ಗೌರಿ ಮತ್ತು ತಂಡದವರು ಉತ್ತರಿಸಿದರು. ನಂತರ ‘ಕೃಷ್ಣ ಲೀಲೆ, ಕಂಸ ವಧೆ’ ಯಕ್ಷಗಾನ ಪ್ರದರ್ಶಿಸಿದರು. ಗೌರಿ, ಆಶಾ ರಾಘವೇಂದ್ರ, ಸುಮಾ ಅನಿಲ್ ಕುಮಾರ್ ಮತ್ತು ಕುಮಾರಿ ಧೃತಿ ಅಮ್ಮೆಂಬಳ ಮುಮ್ಮೇಳದಲ್ಲಿದ್ದರು. ಭಾಗವತರಾಗಿ ಶಂಕರ ಬಾಳಕುದ್ರು, ಮದ್ದಲೆಯಲ್ಲಿ ಗೌತಮ್ ಸಾಸ್ತಾನ್ ಮತ್ತು ಚೆಂಡೆಯಲ್ಲಿ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕ ವೆಂಕಟೇಶ್ ಮೂರ್ತಿ ನೇತೃತ್ವದಲ್ಲಿ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.