ಬೆಂಗಳೂರು: ‘ಕಾಂಡೋಮ್ ಬಳಸಿ ಎಂದು ಮನವಿ ಮಾಡುವ ಲೈಂಗಿಕ ಕಾರ್ಯಕರ್ತೆಯರನ್ನು ದೈಹಿಕವಾಗಿ ಹಿಂಸಿಸಲಾಗುತ್ತದೆ. ಈ ದೃಷ್ಟಿಕೋನದಿಂದಲೂ ಅವರ ಜಗತ್ತನ್ನು ಅರಿಯುವ ಪ್ರಯತ್ನ ಮಾಡಬೇಕಿದೆ’ ಎಂದು ಲೇಖಕ ಅಶೋಕ್ ಅಲೆಕ್ಸಾಂಡರ್ ಅಭಿಪ್ರಾಯಪಟ್ಟರು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾನುವಾರ ತಮ್ಮ ‘ಎ ಸ್ಟ್ರೇಂಜರ್ ಟ್ರುಥ್– ಲೆಸೆನ್ಸ್ ಇನ್ ಲವ್, ಲೀಡರ್ಶಿಪ್ ಆ್ಯಂಡ್ ಕರೇಜ್ ಫ್ರಂ ಇಂಡಿಯಾ ಸೆಕ್ಸ್ ವರ್ಕರ್ಸ್’ ಪುಸ್ತಕ ಕುರಿತ ಸಂವಾದದಲ್ಲಿ ಮಾತನಾಡಿದರು.
‘ಅವಹಾನ್ ಪ್ರತಿಷ್ಠಾನದ ಮೂಲಕಲೈಂಗಿಕ ಕಾರ್ಯಕರ್ತೆಯರನ್ನು ಮಾತನಾಡಿಸಿದಾಗ, ತುಂಬಾ ತಿಳಿದುಕೊಂಡಿದ್ದೇನೆಂಬ ಅಹಂ ಮಾಯವಾಗಿ, ತಿಳಿದುಕೊಂಡ ಅನೇಕ ಸಂಗತಿಗಳನ್ನು ತಿದ್ದಿಕೊಂಡಿದ್ದೇನೆ. ಈ ಪುಸ್ತಕದ ಆರಂಭದ ಕೆಲವು ಪುಟಗಳು ಪ್ರತಿಷ್ಠಾನದೊಂದಿಗೆ ಸಂಪರ್ಕಕ್ಕೆ ಬಂದ ಒಟ್ಟಂದದ ಅನುಭವಗಳಿಗೆ ಮೀಸಲಾಗಿದೆ’ ಎಂದರು.
‘ಲೈಂಗಿಕ ಕಾರ್ಯಕರ್ತೆಯರಿಗೆ ಗೌರವ ನೀಡುವ, ಸೌಜನ್ಯದಿಂದ ನಡೆಸಿಕೊಳ್ಳುವ ಉದಾರತೆಯನ್ನು ಸಮಾಜ ರೂಢಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಾವಿನ್ನೂ ಹಿಂದೆ ಉಳಿದಿದ್ದೇವೆ ಎನ್ನಲು ವಿಷಾದವೆನಿಸುತ್ತದೆ’ ಎಂದು ಹೇಳಿದರು. ‘ಈ ಸಮುದಾಯದಲ್ಲಿ ಆರೋಗ್ಯ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು’ ಎಂದು ಅಭಿಪ್ರಾಯಪಟ್ಟರು.