ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸೋಮವಾರ ಈ ಕುರಿತು ಪ್ರಸ್ತಾಪಿಸಿದ್ದ ಆಡಳಿತ ಪಕ್ಷದ ಸದಸ್ಯ ಬಿ.ಎಸ್.ಸತ್ಯನಾರಾಯಣ, ‘ಕನ್ನಡದ ನೆಲ ಹಾಗೂ ಭಾಷೆಯ ಉಳಿವಿಗಾಗಿ ಹೋರಾಟ ಮಾಡಿದ ಅನೇಕ ಕನ್ನಡ ಸಂಘ ಸಂಸ್ಥೆಗಳಿಗೆ ಹಾಗೂ ಕನ್ನಡ ಶಾಲೆಗಳನ್ನು ನಡೆಸುವ ಸಂಸ್ಥೆಗಳಿಗೆ ಬಿಬಿಎಂಪಿ ವತಿಯಿಂದ ಜಾಗವನ್ನು ಗುತ್ತಿಗೆಗೆ ನೀಡಲಾಗಿತ್ತು. ಈ ಅವಧಿ ಮುಗಿದಿರುವ ಸಂಸ್ಥೆಗಳ ಗುತ್ತಿಗೆಯನ್ನು ನವೀಕರಿಸುವ ಬದಲು ಆ ಜಾಗವನ್ನು ನೀವೇ ಖರೀದಿಸಿ ಎಂದು ಸಂಸ್ಥೆಗಳ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಅಷ್ಟೊಂದು ಹಣ ಈ ಸಂಸ್ಥೆಗಳ ಬಳಿ ಎಲ್ಲಿದೆ. ದಯವಿಟ್ಟು ಈ ಸಂಸ್ಥೆಗಳ ಜಾಗದ ಗುತ್ತಿಗೆಯನ್ನು ನವೀಕರಿಸಿ’ ಎಂದು ಒತ್ತಾಯಿಸಿದರು.