ಬೆಂಗಳೂರು:ಕೊರೊನಾ ಸೋಂಕಿನಿಂದ ಮೃತಪಟ್ಟ ಪತಿಯ ಮುಖ ನೋಡಲು ಬರಲಾಗದ ಮಹಿಳೆ ಆಸ್ಪತ್ರೆಯಲ್ಲೇ ರೋಧಿಸುತ್ತಿದ್ದರೆ,ತಂದೆಯ ಮುಖ ನೋಡಲು ಸಾಧ್ಯವಾಗದೆ ಮಗ ಕುಳಿತಲ್ಲೇ ಕಣ್ಣೀರಿಟ್ಟರು.
ಕುರುಬರಹಳ್ಳಿಯಲ್ಲಿ ಕೊರೊನಾ ಸೋಂಕಿನಿಂದ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರ ಪತ್ನಿಗೂ ಸೋಂಕಿರುವ ಕಾರಣ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗದೆ ದುಃಖದಲ್ಲಿ ಮುಳುಗಿದ್ದರು.
ಇನ್ನೊಂದೆಡೆ, ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಬಿಬಿಎಂಪಿ ಸಿಬ್ಬಂದಿ ಮುಂದಾದರು. ತಂದೆಯ ಮುಖವನ್ನು ಕೊನೆಯ ಬಾರಿ ನೋಡಲಾಗದೆ, ಅಗ್ನಿ ಸ್ಪರ್ಶವನ್ನೂ ಮಾಡಲಾಗದೆ ಮಗ ಸಂಕಟದಿಂದ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಬಾರದ ಆಂಬುಲೆನ್ಸ್:ಯಶವಂತಪುರದ ಮೋಹನ್ ಕುಮಾರ್ ನಗರದ 48 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಖಚಿತಗೊಂಡು ಎರಡು ದಿನಗಳು ಕಳೆದರೂ ಆಂಬುಲೆನ್ಸ್ ಬರಲಿಲ್ಲ.
ಭಾನುವಾರ ಮಾತನಾಡಲು ಸಾಧ್ಯವಾಗದ ಸ್ಥಿತಿಗೆ ಸೋಂಕಿತ ವ್ಯಕ್ತಿ ತಲುಪಿದಾಗ ಕುಟುಂಬದವರು ಕಾರಿನಲ್ಲೇ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರ ಸಲಹೆಯಂತೆ ಅದೇ ಕಾರಿನಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.
ಇದೇ ರೀತಿ, ಆಂಬುಲೆನ್ಸ್ ಬರದೆ ವಿ.ವಿ. ಪುರ ಮತ್ತು ಬಸವೇಶ್ವರ ನಗರದಲ್ಲೂ ಸೋಂಕಿತರು ಕಷ್ಟಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.