ಬೆಂಗಳೂರು: ನಗರದ ಪೂರ್ವ ವಲಯ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಪರಿಹಾರ ಕ್ರಮಗಳ ಕುರಿತು ಸಚಿವ ವಿ. ಸೋಮಣ್ಣ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಶುಕ್ರವಾರ ಸಭೆ ನಡೆಸಿದರು.
‘ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪರೀಕ್ಷಾ ಸಂಖ್ಯೆಯನ್ನೂ ಹೆಚ್ಚು ಮಾಡಬೇಕಾಗಿದೆ. ಜ್ವರ ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಪ್ರತಿ ವಾರ್ಡ್ನಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಜ್ವರ ತಪಾಸಣಾ ಕೇಂದ್ರ ಪ್ರಾರಂಭಿಸಲಾಗುವುದು’ ಎಂದು ಅವರು ಹೇಳಿದರು.
‘ಈ ಹಿಂದೆ ನಗರದಲ್ಲಿ ಸ್ಯಾನಿಟೈಸ್ ಮಾಡುತ್ತಿದ್ದ ಮಾದರಿಯಲ್ಲೇ ಮತ್ತೆೆ ಸೋಂಕು ಮುಕ್ತ ದ್ರಾವಣ ಸಿಂಪಡಿಸುವ ಕೆಲಸ ಪ್ರಾರಂಭಿಸಲಾಗುವುದು. ಈ ಸಂಬಂಧ ಜಲಮಂಡಳಿ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಮಾತನಾಡಿ ಶನಿವಾರದಿಂದಲೇ ನಗರದಲ್ಲಿ ಸ್ಯಾನಿಟೈಸ್ ಕಾರ್ಯ ಪ್ರಾರಂಭಿಸಲಾಗುವುದು’ ಎಂದರು.
ಸಂಖ್ಯೆಗಾಗಿ ಕಾಯಬೇಕಿಲ್ಲ:ಕೊರೊನಾ ಸೋಂಕು ದೃಢಪಟ್ಟವರು ಹಾಗೂ ತುರ್ತು ಚಿಕಿತ್ಸೆೆಯ ಅವಶ್ಯಕತೆ ಇರುವವರಿಗೆ ರೋಗಿ ಸಂಖ್ಯೆ (ಬಿಯು–ಬೆಂಗಳೂರು ಅರ್ಬನ್) ನೀಡಲಾಗುತ್ತದೆ. ಆದರೆ, ಈ ಸಂಖ್ಯೆಗಾಗಿ ಕಾಯುವ ಅವಶ್ಯಕತೆ ಇಲ್ಲ. ಆಸ್ಪತ್ರೆೆಗಳೂ ಸಹ ತುರ್ತು ಚಿಕಿತ್ಸೆೆ ಅವಶ್ಯಕತೆ ಇರುವವರಿಗೆ ಬಿಯು ಸಂಖ್ಯೆೆ ಇಲ್ಲದೆ ಇದರೂ, ಕೂಡಲೇ ಸ್ಪಂದಿಸಬೇಕು. ಈ ಸಂಬಂಧ ಆಯುಕ್ತರು ನಿರ್ದೇಶನ ನೀಡಲಿದ್ದಾರೆ ಎಂದು ಹೇಳಿದರು.
3 ಲಕ್ಷ ಲಸಿಕೆ:‘ನಗರಕ್ಕೆೆ ಅಗತ್ಯವಿರುವಷ್ಟು ಕೋವಿಡ್ ಲಸಿಕೆ ನೀಡುವಂತೆ ಮನವಿ ಮಾಡಲಾಗಿದೆ. ರಾಜ್ಯಕ್ಕೆೆ 10 ಲಕ್ಷ ಕೋವಿಡ್ ಲಸಿಕೆ ಬರಲಿದ್ದು, ಇದರಲ್ಲಿ 3 ಲಕ್ಷ ಕೋವಿಡ್ ಲಸಿಕೆ ನಗರಕ್ಕೆೆ ನೀಡುವಂತೆ ಮನವಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ಸಂಸದ ಪಿ.ಸಿ.ಮೋಹನ್, ಶಾಸಕರಾದ ಕೆ.ಜೆ. ಜಾರ್ಜ್, ಎನ್.ಎ ಹ್ಯಾರಿಸ್, ರಿಜ್ವಾನ್ ಆರ್ಷದ್, ಬಿ.ಎಸ್. ಸುರೇಶ್, ಅಖಂಡ ಶ್ರೀನಿವಾಸ್ ಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ವಲಯ ಆಯುಕ್ತರಾದ ಮನೋಜ್ ಜೈನ್, ಬಸವರಾಜು, ವಲಯ ಸಂಯೋಜಕರಾದ ಮನೋಜ್ ಕುಮಾರ್ ಮೀನಾ, ಉಜ್ವಲ್ ಘೋಷ್, ಜಂಟಿ ಆಯುಕ್ತರಾದ ಪಲ್ಲವಿ ಹಾಗೂ ಶಿವಸ್ವಾಮಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.