ಬೆಂಗಳೂರು: ಬಿಬಿಎಂಪಿ 10 ಸ್ಥಾಯಿ ಸಮಿತಿಗಳಿಗೆ ಗುರುವಾರ ಹೊಸ ಅಧ್ಯಕ್ಷರನ್ನು ಆಯ್ಕೆಮಾಡಲಾಯಿತು. ಎರಡು ಸಮಿತಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಯಿತು..
ಮೇಯರ್ ಎಂ. ಗೌತಮ್ ಕುಮಾರ್ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 8 ಸಮಿತಿಗಳಿಗೆ ಬಿಜೆಪಿ ಸದಸ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸಮಿತಿಗೆ ಯಶವಂತಪುರ ವಾರ್ಡ್ನ ಸದಸ್ಯ ಜಿ.ಕೆ.ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ನಿಂದ ಚುನಾಯಿತರಾಗಿದ್ದಇವರನ್ನು ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಕಾರಣಕ್ಕೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.
ಪಕ್ಷೇತರ ಸದಸ್ಯ ಸಿ.ಆರ್.ಲಕ್ಷ್ಮೀನಾರಾಯಣ ಅವರಿಗೆ ಅಪೀಲುಗಳ ಸಮಿತಿ ಅಧ್ಯಕ್ಷ ಸ್ಥಾನ ಒಲಿದಿದೆ. ತೋಟಗಾರಿಕೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸಮಿತಿಗಳಿಗೆ ಸದ್ಯ ತಲಾ 10 ಸದಸ್ಯರು ಮಾತ್ರ ಇದ್ದು, ತಲಾ ಒಬ್ಬರು ಸದಸ್ಯರ ನೇಮಕ ಬಾಕಿ ಇದೆ.
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಇದೇ 18ರಂದು ಚುನಾವಣೆ ನಡೆದಾಗ ಎಂ. ಆಂಜನಪ್ಪ ಅವರು ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ತೋಟಗಾರಿಕಾ ಸ್ಥಾಯಿ ಸಮಿತಿಗಳಿಗೆ ನಾಮಪತ್ರ ಸಲ್ಲಿಸಿದ್ದರು. ಒಬ್ಬ ಸದಸ್ಯ ಎರಡು ಸಮಿತಿಗೆ ಸದಸ್ಯರಾಗಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಅವರ ಅರ್ಜಿಯನ್ನು ತೋಟಗಾರಿಕಾ ಸಮಿತಿಯಿಂದ ತಿರಸ್ಕರಿಸಲಾಗಿತ್ತು.
ನಾಮಪತ್ರ ಸಲ್ಲಿಸಿದ್ದ ಅಬ್ದುಲ್ ವಾಜಿದ್ ಉಮೇದುವಾರಿಕೆ ವಾಪಸ್ ಪಡೆದಿದ್ದರು. ಹಾಗಾಗಿ ಈ ಸಮಿತಿಯಲ್ಲಿ 10 ಸದಸ್ಯರು ಮಾತ್ರ ಆಯ್ಕೆಯಾಗಿದ್ದರು. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ನಾಮಪತ್ರ ಸಲ್ಲಿಸಿದ್ದ 12 ಮಂದಿಯ ಪೈಕಿ ವಿ. ಶಿವಪ್ರಕಾಶ್ ಮತ್ತು ಶಾಂತಾ ಬಾಬು ಉಮೇದುವಾರಿಕೆ ವಾಪಸ್ ಪಡೆದಿದ್ದರು. ಇದರಿಂದಾಗಿ ಈ ಸಮಿತಿಗೆ 10 ಸದಸ್ಯರು ಮಾತ್ರ ಆಯ್ಕೆಯಾಗಿದ್ದರು.
ಖಾಲಿ ಸ್ಥಾನ ಭರ್ತಿಗೆ ಮತ್ತೆ ಚುನಾವಣೆ ನಡೆಯಬೇಕು. ಹೀಗಾಗಿ ಅಧ್ಯಕ್ಷರ ಆಯ್ಕೆ ನಡೆಸಿಲ್ಲ. ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸಬೇಕಿದೆ. ಆ ಬಳಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮೇಯರ್ ನಡೆಸಲಿದ್ದಾರೆ.