ಬೆಂಗಳೂರು: ‘ಹೆಚ್ಚಿನ ಜವಾಬ್ದಾರಿಯಿಂದ ಜನಗಣತಿ ಕಾರ್ಯ ಕೈಗೊಳ್ಳಬೇಕು’ ಎಂದು ಕಂದಾಯ ಸಚಿವ ಆರ್. ಅಶೋಕ ಸಲಹೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಪ್ರಧಾನ ಜನಗಣತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಮೊಬೈಲ್ ಆ್ಯಪ್ ಮೂಲಕ ಜನಗಣತಿ ಮಾಡಲಾಗುತ್ತಿದೆ. ಹೀಗಾಗಿ, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ’ ಎಂದರು.
‘ಸರ್ಕಾರದ ಯೋಜನೆಗಳ ಜಾರಿಗೆ ಗಣತಿಯಿಂದ ಲಭ್ಯವಾಗುವ ಮಾಹಿತಿಗಳು ಅತ್ಯಂತ ಮಹತ್ವದ್ದಾಗಿದೆ. ಸೌಲಭ್ಯಗಳ ವಿತರಣೆಗೂ ಅಂಕಿ-ಅಂಶ ಆಧಾರ. ಜನಗಣತಿ ಮಾಹಿತಿ ಆಧರಿಸಿಯೇ ವಾರ್ಡ್ಗಳ ವಿಂಗಡಣೆ, ವಿಧಾನಸಭೆ, ಲೋಕಸಭೆ ಕ್ಷೇತ್ರಗಳ ಪುನರ್ರಚನೆ ಮಾಡಲಾಗುತ್ತದೆ’ ಎಂದರು.
‘ಕೆಳಹಂತದ ಅಧಿಕಾರಿಗಳಿಗೆ ಪ್ರಧಾನ ಜನಗಣತಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮಾತನಾಡಿ, ‘ಸ್ವಾತಂತ್ರ್ಯದ ಬಳಿಕ ಎಂಟನೇ ಜನಗಣತಿ ನಡೆಯುತ್ತಿದೆ. ಏ. 15ರಿಂದ ಮೇ 30ರ ವರೆಗೆ ಗಣತಿ ಕಾರ್ಯ ನಡೆಯಲಿದೆ’ ಎಂದರು.