ಬೆಂಗಳೂರು: ’ನಗರದ ವಿಶ್ವೇಶ್ವರಯ್ಯಎಂಜಿನಿಯರಿಂಗ್ ಕಾಲೇಜಿಗೆ (ಯುವಿಸಿಇ) ಐಐಟಿ ಮಾದರಿಯಲ್ಲಿ ಸ್ವಾಯತ್ತತೆ ನೀಡುವ ಸಂಬಂಧ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಬ್ರಿಗೇಡ್ ಗೇಟ್ ವೇ ಕ್ಯಾಂಪಸ್ನಲ್ಲಿ ನಿರ್ಮಿಸಿರುವ ಸರ್.ಎಂ.ವಿಶ್ವೇಶ್ವರಯ್ಯನವರ 11.6 ಅಡಿ ಎತ್ತರದ ಲೋಹದ ಪ್ರತಿಮೆ ಅನಾವರಣಗೊಳಿಸಿ ಶನಿವಾರ ಮಾತನಾಡಿದರು.
‘ಉನ್ನತ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವುದು ನಮ್ಮ ಉದ್ದೇಶ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಯುವಿಸಿಇಗೆ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾಯತ್ತತೆ ನೀಡಲು ನಿರ್ಧರಿಸಲಾಗಿದೆ. ಡಾ.ಎಸ್.ಸಡಗೋಪನ್ ನೇತೃತ್ವದ ಸಮಿತಿ ನೀಡಿರುವ ವರದಿ ಮತ್ತು ಶಿಫಾರಸುಗಳನ್ನು ಅಂಗೀಕರಿಸಲಾಗಿದೆ’ ಎಂದರು.
ವಿಶ್ವೇಶ್ವರಯ್ಯ ಸಮಾಧಿ ಅಭಿವೃದ್ಧಿಗೆ ಟ್ರಸ್ಟ್: ‘ಚಿಕ್ಕಬಳ್ಳಾಪುರದ ಮುದ್ದೇನ ಹಳ್ಳಿ ಗ್ರಾಮದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಸಮಾಧಿ ಅಭಿವೃದ್ಧಿಗೆ ವಿಟಿಯು ಕುಲಪತಿ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚನೆ ಮಾಡಲಾಗುತ್ತದೆ’ ಎಂದು ತಿಳಿಸಿದರು.
ಪ್ರತಿಮೆ ಹೇಗಿದೆ: ಬ್ರಿಗೇಡ್ ಸಮೂಹ ಸ್ಥಾಪಿಸಿರುವ ಪ್ರತಿಮೆಯು ಒಟ್ಟು 1,300 ಕೆ.ಜಿ. ತೂಕವಿದೆ. ಇದಕ್ಕಾಗಿ 1,000 ಕೆ.ಜಿ. ತಾಮ್ರ ಮತ್ತು 300 ಕೆ.ಜಿ. ಮಿಶ್ರಲೋಹ ಬಳಸಲಾಗಿದೆ. ಖ್ಯಾತ ಶಿಲ್ಪಿ ಮಾಯನ್ ಎನ್.ಬಡಿಗೇರ್ ಹಾಗೂ ಅವರ ತಂಡದವರು ಇದನ್ನು ರೂಪಿಸಿದ್ದಾರೆ.