ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಲಕ್ಷ ಲಂಚ ಪಡೆಯುವಾಗ ಬೆಸ್ಕಾಂ ಕಿರಿಯ ಎಂಜಿನಿಯರ್ ಪ್ರಕಾಶ್ ಲೋಕಾಯುಕ್ತ ಬಲೆಗೆ

ಬೆಸ್ಕಾಂ ಉತ್ತರ–2 ವಿಜಯನಗರ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಪ್ರಕಾಶ್
Published 31 ಜನವರಿ 2024, 14:04 IST
Last Updated 31 ಜನವರಿ 2024, 14:04 IST
ಅಕ್ಷರ ಗಾತ್ರ

ಬೆಂಗಳೂರು: ಬಹುಮಹಡಿ ಕಟ್ಟಡವೊಂದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ₹ 1 ಲಕ್ಷ ಲಂಚ ಪಡೆದ ಬೆಸ್ಕಾಂ ಉತ್ತರ–2 ವಿಜಯನಗರ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಪ್ರಕಾಶ್ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ವಿಜಯನಗರದಲ್ಲಿರುವ ರತ್ನಾ ಆ್ಯಂಡ್‌ ಉಮರಾಣಿ ಎಂಬ ಬಹುಮಹಡಿ ಕಟ್ಟಡಕ್ಕೆ ನೀಡಿದ್ದ ವಿದ್ಯುತ್‌ ಪೂರೈಕೆಯ ಸಂಪರ್ಕವನ್ನು ಪುನಃ ಚಾಲನೆಗೊಳಿಸಬೇಕಿತ್ತು. ಇದಕ್ಕಾಗಿ ವಿದ್ಯುತ್‌ ಕಾಮಗಾರಿಗಳ ಗುತ್ತಿಗೆದಾರ ಮಂಜೇಶ್‌ ಎಂಬುವವರು ಅರ್ಜಿ ಸಲ್ಲಿಸಿದ್ದರು.

ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡಲು ₹ 2.50 ಲಕ್ಷ ಲಂಚ ನೀಡುವಂತೆ ಪ್ರಕಾಶ್‌ ಬೇಡಿಕೆ ಇಟ್ಟಿದ್ದರು. ಅರ್ಜಿದಾರರು ಚೌಕಾಸಿ ನಡೆಸಿದಾಗ ₹ 1 ಲಕ್ಷ ಕೊಟ್ಟರೆ ಒಪ್ಪಿಗೆ ನೀಡುವುದಾಗಿ ಹೇಳಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ಘಟಕಕ್ಕೆ ದೂರು ನೀಡಿದ್ದರು.

ಆರೋಪಿಯ ಸೂಚನೆಯಂತೆ ಬೆಸ್ಕಾಂ ವಿಜಯನಗರ ಉಪ ವಿಭಾಗದ ಕಚೇರಿಯಲ್ಲಿ ಬುಧವಾರ ಸಂಜೆ ಭೇಟಿಮಾಡಿದ ಮಂಜೇಶ್‌ ₹ 1 ಲಕ್ಷ ಲಂಚದ ಹಣವನ್ನು ತಲುಪಿಸಿದರು. ಪ್ರಕಾಶ್‌ ಹಣ ಪಡೆಯುತ್ತಿದ್ದಂತೆಯೇ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದರು.

ಲೋಕಾಯುಕ್ತದ ಬೆಂಗಳೂರು ನಗರ–1 ಎಸ್‌ಪಿ ಶ್ರೀನಾಥ್‌ ಜೋಶಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಿ.ಎಲ್‌. ಶ್ರೀನಿವಾಸಮೂರ್ತಿ ಮೇಲುಸ್ತುವಾರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ ಆನಂದ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT