ಬೆಂಗಳೂರು: ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ–ಕರ್ನಾಟಕ ಮತ್ತು ಸಮತಾ ಸೈನಿಕ ದಳದಿಂದ 205ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ನಡೆಯಿತು.
‘ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಶೂದ್ರ ಸಮುದಾಯಗಳು ಪ್ರಗತಿ ಸಾಧಿಸಲು ಭೀಮಾ ಕೋರೆಗಾಂವ್ ಯುದ್ಧವೇ ಬುನಾದಿಯಾಗಿದೆ’ ಎಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ–ಕರ್ನಾಟಕದ ಮುಖಂಡ ಬಿ. ಗೋಪಾಲ್ ಹೇಳಿದರು.
‘ಭೀಮಾ ಕೋರೆಗಾಂವ್ ಯುದ್ಧ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಘಟನೆ. 1818 ಜನವರಿ 1ರಂದು ಮನುವಾದಿ ಪೇಶ್ವೆ ಬಾಜಿರಾಯನ 28 ಸಾವಿರ ಸೈನಿಕರನ್ನು ಕೇವಲ 500 ಮಹರ್ ಸೈನಿಕರು 12 ಗಂಟೆಯಲ್ಲಿ ಸೋಲಿಸಿ ಶೋಷಿತರ ಪರ ಧ್ವನಿ ಎತ್ತಿದ್ದರು. ಹುತಾತ್ಮರಾಗಿದ್ದ ಸೈನಿಕರ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್ನಲ್ಲಿ ಸ್ಮಾರಕ ನಿರ್ಮಿಸಿದ್ದರು. 1927ರಿಂದ ಪ್ರತಿವರ್ಷ ಅಂಬೇಡ್ಕರ್ ಜ.1ರಂದು ಅಲ್ಲಿಗೆ ಹೋಗಿ ನಮನ ಸಲ್ಲಿಸುತ್ತಿದ್ದರು’ ಎಂದು ಮಾಹಿತಿ ನೀಡಿದರು.
‘ಭಾರತದ ಮೂಲ ನಿವಾಸಿ ಸಮುದಾಯಗಳಲ್ಲಿ ಹೊಸ ಭರವಸೆ ಮತ್ತು ಉತ್ಸಾಹ ತುಂಬಲು ಈ ವಿಜಯೋತ್ಸವವೇ ಸ್ಪೂರ್ತಿ. ಇದರ ಸಂಕೇತವಾಗಿ ಅಸ್ಪೃಶ್ಯರು ಸೇರಿ ದೇಶದ ಎಲ್ಲಾ ವರ್ಗದ ಜನ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ನಾವು ಆಳುವ ಸಮಾಜವಾಗಿ ದೌರ್ಜನ್ಯ ದಬ್ಬಾಳಿಕೆಯನ್ನು ಪ್ರತಿಭಟಿಸಬೇಕಿದೆ’ ಎಂದರು.
ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪಥಸಂಚಲನ ನಡೆಸಿದರು. ನಂತರ ಧ್ವಜವಂದನೆ ಸೇರಿ ಪ್ರತಿಜ್ಞಾ ವಿಧಿ ಮತ್ತು ಭೀಮ ಸಂದೇಶ ಕಾರ್ಯಕ್ರಮ ನಡೆಯಿತು.