ಸಂಜೆ 7 ಗಂಟೆಯಿಂದ 8.30ರ ವರೆಗೆ ಜನಾರ್ದನ ಅವರು ದಲಿತ ಗೀತೆಗಳು, ಜಾನಪದ ಮತ್ತು ಕ್ರಾಂತಿ ಗೀತೆಗಳನ್ನು ಹಾಡಲಿದ್ದಾರೆ. ಮೈಸೂರು ಮೂಲದ ಜನಾರ್ದನ್ ಅವರು ಮೂರು ದಶಕಗಳಿಂದ ನಾಟಕ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗಾಯಣದ ಸ್ಥಾಪನೆಯಲ್ಲಿ ಬಿ.ವಿ. ಕಾರಂತ ಅವರೊಂದಿಗೆ ಸಕ್ರಿಯ ಪಾತ್ರ ವಹಿಸಿದ್ದ ಜನಾರ್ದನ್, ರಂಗಾಯಣದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಚಿತ್ರರಂಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಹಿನ್ನೆಲೆ ಗಾಯಕರಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜನಾರ್ದನ್ ನೇತೃತ್ವದ ಜನಮನ ತಂಡದಿಂದ ಜಾನಪದ ಗೀತೆಗಳು, ವಚನಗಳು, ರಂಗ ಗೀತೆ, ಹೋರಾಟದ ಗೀತೆಗಳ ಕಾರ್ಯಕ್ರಮ ನಡೆಯಲಿದೆ ಎಂದು ಬಿಐಸಿ ತಿಳಿಸಿದೆ.