ಬೆಂಗಳೂರು: ಬಿಟ್ಕಾಯಿನ್ ಅಕ್ರಮ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ವಿಶೇಷ ತನಿಖಾ ದಳದ (ಎಸ್ಐಟಿ) ತನಿಖಾಧಿಕಾರಿಗಳ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿ, ಪರಾರಿಯಾಗಿರುವ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರ್ (47) ಅವರ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಸಿಐಡಿ ಪ್ರಕಟಣೆ ಹೊರಡಿಸಿದೆ.
ಬಿಟ್ಕಾಯಿನ್ ಅಕ್ರಮ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಶ್ರೀಧರ್ ಸಹ ಪ್ರಮುಖ ಆರೋಪಿ.
ಶ್ರೀಧರ್ ತಲೆಮರೆಸಿಕೊಂಡಿದ್ದು, 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕಲಂ. 82ರ ಅಡಿಯಲ್ಲಿ ಘೋಷಿತ ಅಪರಾಧಿ ಎಂದು ಉದ್ಘೋಷಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅವರ ಮಾಹಿತಿ ನೀಡಿದಲ್ಲಿ ಅಥವಾ ಅವರನ್ನು ಹಿಡಿದು ಕೊಟ್ಟಲ್ಲಿ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿಯಾಗಿದ್ದ ಶ್ರೀಧರ್ ಅವರನ್ನು ಬಂಧಿಸಲು ಫೆಬ್ರುವರಿ 27ರಂದು ಎಸ್ಐಟಿಯ ಇಬ್ಬರು ಅಧಿಕಾರಿಗಳು ತೆರಳಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜು ಬಳಿಯ ಮೆಟ್ರೊ ನಿಲ್ದಾಣದ ಬಳಿ ವಕೀಲರ ಜೊತೆಗೆ ಕಾರಿನಲ್ಲಿದ್ದ ಶ್ರೀಧರ್ ಅವರು ತನಿಖಾಧಿಕಾರಿಗಳನ್ನು ಕಂಡತಕ್ಷಣ ತಪ್ಪಿಸಿಕೊಂಡು ಪರಾರಿಯಾಗಲು ಮುಂದಾದರು. ಅವರನ್ನು ಹಿಡಿಯಲು ತನಿಖಾಧಿಕಾರಿಗಳು ಬೆನ್ನಟ್ಟಿದರು. ಕಾಫಿ ಬೋರ್ಡ್ ಸಿಗ್ನಲ್ ಬಳಿ ಶ್ರೀಧರ್ ಅವರನ್ನು ಹಿಡಿಯಲು ಮುಂದಾದಾಗ ಎಸ್ಐಟಿ ಅಧಿಕಾರಿಗಳ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಎಎಸ್ಐ ಭಾಸ್ಕರ್ ಗಂಭೀರವಾಗಿ ಗಾಯಗೊಂಡಿದ್ದರು.