ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ‘ಬೂತ್‌ ವಿಜಯ’ ಅಭಿಯಾನಕ್ಕೆ ಚಾಲನೆ

Last Updated 2 ಜನವರಿ 2023, 21:29 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯ ಮುಂದಿನ ಚುನಾವಣೆಯಲ್ಲಿ ‘ಮಿಷನ್‌ 150’ ಗುರಿ ಸಾಧಿಸಲು ಬಿಜೆಪಿ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ‘ಬೂತ್ ವಿಜಯ’ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಈ ಅಭಿಯಾನವು ಇದೇ 12 ರವರೆಗೆ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಶಿವಾಜಿ
ನಗರ ವಿಧಾನಸಭಾ ಕ್ಷೇತ್ರದಿಂದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯ
ಕರ್ತರ ಮನೆಗಳಲ್ಲಿ ಪಕ್ಷದ ಧ್ವಜಗಳನ್ನು ಹಾರಿಸುವುದಕ್ಕೂ ಚಾಲನೆ
ನೀಡಲಾಯಿತು. ಬೊಮ್ಮಾಯಿ ಅವರು ಕೆಲವು ಮನೆಗಳಲ್ಲಿ ಪಕ್ಷದ ಧ್ವಜವನ್ನು ಕಟ್ಟಿದರು.

ಪ್ರತಿಯೊಂದು ಬೂತ್‌ನಲ್ಲಿ ವಿರೋಧ ಪಕ್ಷಗಳಿಗಿಂತ ಅಧಿಕ ಮತಗಳನ್ನು ಗಳಿಸಲು ಕಾರ್ಯಕರ್ತ
ರನ್ನು ಅಣಿಗೊಳಿಸುವುದು ಈ ಅಭಿಯಾನದ ಉದ್ದೇಶ. ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳ 312 ಮಂಡಲಗಳು, 1,445 ಮಹಾಶಕ್ತಿ ಕೇಂದ್ರಗಳು, 11,642 ಶಕ್ತಿಕೇಂದ್ರಗಳು ಮತ್ತು 58,186 ಬೂತ್‌ಗಳ ಕಾರ್ಯಕರ್ತರು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ (ಗದಗ), ಶೋಭಾ ಕರಂದ್ಲಾಜೆ (ಉಡುಪಿ), ಭಗವಂತ ಖೂಬಾ (ಬೀದರ್‌), ಎ.ನಾರಾಯಣ
ಸ್ವಾಮಿ (ಚಿತ್ರದುರ್ಗ), ಶಾಸಕ ಜಗದೀಶ ಶೆಟ್ಟರ್‌ (ಹಾವೇರಿ), ಸಂಸದ
ಡಿ.ವಿ.ಸದಾನಂದಗೌಡ (ಬೆಂಗಳೂರು ಉತ್ತರ), ಶಾಸಕ ಕೆ.ಎಸ್‌.ಈಶ್ವರಪ್ಪ (ಶಿವಮೊಗ್ಗ), ವಿಧಾನಪರಿಷತ್‌
ಸದಸ್ಯ ಲಕ್ಷ್ಮಣ ಸವದಿ (ಚಿಕ್ಕೋಡಿ), ಸಚಿವರಾದ ಆರ್‌.ಅಶೋಕ (ಬೆಂಗಳೂರು ದಕ್ಷಿಣ), ಕೆ.ಗೋಪಾಲಯ್ಯ (ಹಾಸನ) ಅವರು ವಿವಿಧೆಡೆ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಅಭಿಯಾನಕ್ಕಾಗಿ ಬೂತ್‌ ಸಮಿತಿ ಪರಿಶೀಲನೆ, ಪೇಜ್‌ ಪ್ರಮುಖ್ ನಿಯುಕ್ತಿ, ಬೂತ್ ವಾಟ್ಸ್‌ ಆ್ಯಪ್ ಗ್ರೂಪ್‌ಗಳ ರಚನೆ, ಮನ್‌ಕೀ ಬಾತ್‌ ವೀಕ್ಷಣೆಗೆ ಸುಮಾರು 60 ಸಾವಿರ ಗುಂಪುಗಳ ರಚನೆ ಮಾಡಲಾಗುವುದು ಎಂದು ಬಿಜೆಪಿ ಹೇಳಿದೆ.

ಶಿವಾಜಿನಗರದಿಂದಲೇ ಗೆಲುವಿನ ಆರಂಭ: ಬೊಮ್ಮಾಯಿ

‘ಶಿವಾಜಿನಗರದಲ್ಲಿ ಬಿಜೆಪಿ ಗೆದ್ದರೆ, ಕರ್ನಾಟಕದಲ್ಲಿ 130ಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿಗೆ ಬಂದೇ ಬರುತ್ತದೆ. ಇದೊಂದು ಒಂದು ರಾಜಕೀಯ ಸಂಕೇತ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಬಿಜೆಪಿಗೆ ಶಕ್ತಿ ಇಲ್ಲದ ಕಾಲದಲ್ಲಿಯೇ ಈ ಕ್ಷೇತ್ರದಲ್ಲಿ ಗೆದ್ದಿತ್ತು. ಕ್ಷೇತ್ರದ ಗೆಲುವಿಗಾಗಿಯೇ ಇಲ್ಲಿ ಬಂದಿದ್ದೇನೆ. ಶಿವಾಜಿನಗರಕ್ಕೆ ಹೆಚ್ಚಿನ ಸಮಯ ಕೊಡಲಿದ್ದು, ಕರೆದಾಗ ಬಂದು ಇಲ್ಲಿನ ಕೆಲಸಗಳನ್ನು ಮಾಡುವೆ’ ಎಂದರು.

ಪ್ರತಿಯೊಂದು ಬೂತ್‌ ಸಶಕ್ತಗೊಳಿಸಲು ಪ್ರಮುಖರ ಸಭೆ ಕರೆದು, 100 ಪ್ರಮುಖ ಸಕ್ರಿಯ ಕಾರ್ಯಕರ್ತರಿರುವ ಸಮಿತಿ ರಚಿಸಬೇಕು. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಯುವ ಮೋರ್ಚಾ ಸ್ಥಾಪಿಸಿ ಅಹರ್ನಿಶಿ ಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಹಾಗೂ ಕಾಂಗ್ರೆಸ್ಸಿನ ಜನವಿರೋಧಿ ನೀತಿಯನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT