ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್‌ಗೆ ಹಣ ಪಡೆದು ವಂಚನೆ: ಚೈತ್ರಾ–ಆಪ್ತರ ಬಳಿ ₹81 ಲಕ್ಷ ನಗದು ಜಪ್ತಿ

ಸ್ಥಳ ಮಹಜರು ನಡೆಸಿದ ಸಿಸಿಬಿ * ಕುಮಾರಕೃಪಾದಲ್ಲಿ ಘಟನೆ ಮರುಸೃಷ್ಟಿ
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಭಾನುವಾರ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತೊಬ್ಬ ಆರೋಪಿ ಅಭಿನವ ಹಾಲವೀರಪ್ಪ ಸ್ವಾಮೀಜಿಯ ಚಾಲಕನನ್ನು ವಶಕ್ಕೆ ಪಡೆದು ಶನಿವಾರ ವಿಚಾರಣೆ ನಡೆಸಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಕುಸಿದುಬಿದ್ದಿದ್ದ ಚೈತ್ರಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದಾಗಿ ಹೇಳಿರುವ ವೈದ್ಯರು, ‘ಚೈತ್ರಾ ಪದೇ ಪದೇ ನಿತ್ರಾಣ ಸ್ಥಿತಿಗೆ ಹೋಗುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿ, ತೀವ್ರ ನಿಗಾ ಘಟಕದಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು. ಬಳಿಕವೇ ಬಿಡುಗಡೆ ಮಾಡಲಾಗುವುದು’ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು, ‘ಚೈತ್ರಾ ಅವರನ್ನು ಶನಿವಾರ ಬಿಡುಗಡೆ ಮಾಡುವುದಾಗಿ ವೈದ್ಯರು ಹೇಳಿದ್ದರು. ಆದರೆ, ರಾತ್ರಿಯವರೆಗೂ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಆರೋಗ್ಯದ ಬಗ್ಗೆ ನಿಗಾ ವಹಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ವೈದ್ಯರ ಸಲಹೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಚೈತ್ರಾ ಆತ್ಮಹತ್ಯೆಗೆ ಯತ್ನಿಸುವ ಸಾಧ್ಯತೆ ಇದೆ. ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯೂ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಭಾನುವಾರ ಚೈತ್ರಾ ಬಿಡುಗಡೆಯಾಗುತ್ತಿದ್ದಂತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗುವುದಕ್ಕೂ ಮುನ್ನವೇ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.

ಸ್ವಾಮೀಜಿ ಸುಳಿವು ಪತ್ತೆಗೆ ವಿಚಾರಣೆ: ‘ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಂದ ₹ 1.50 ಕೋಟಿ ಪಡೆದಿದ್ದರು ಎನ್ನಲಾದ ಹೊಸಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಸದ್ಯ ತಲೆಮರೆಸಿಕೊಂಡಿದ್ದಾರೆ. ಇವರು ಎಲ್ಲಿದ್ದಾರೆ ಎಂಬುದರ ಸುಳಿವು ಪತ್ತೆ ಮಾಡಲು, ಅವರ ಕಾರು ಚಾಲಕನನ್ನು ವಿಚಾರಣೆ ನಡೆಸಲಾಯಿತು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಸ್ವಾಮೀಜಿ ಬಳಿ ಹಲವು ವರ್ಷಗಳಿಂದ ಚಾಲಕ ಕೆಲಸ ಮಾಡುತ್ತಿದ್ದ. ಪ್ರಕರಣ ದಾಖಲಾಗುವುದಕ್ಕೂ ಮೂರು ದಿನ ಮುಂಚೆಯೇ ಸ್ವಾಮೀಜಿ ಮಠ ತೊರೆದಿದ್ದಾರೆ. ದೂರುದಾರರಿಂದ ಹಣ ಪಡೆದಿದ್ದ ಸಂಗತಿ ಚಾಲಕನಿಗೆ ಗೊತ್ತಿದೆ. ಆದರೆ, ಸ್ವಾಮೀಜಿ ಎಲ್ಲಿದ್ದಾರೆಂಬುದು ಚಾಲಕನಿಗೆ ಗೊತ್ತಿಲ್ಲ’ ಎಂದು ಮೂಲಗಳು ತಿಳಿಸಿವೆ.

ಕುಮಾರಕೃಪಾದಲ್ಲಿ ಮರುಸೃಷ್ಟಿ: ಪ್ರಕರಣದ ಆರೋಪಿ ಬಿ.ಎಲ್. ಚನ್ನ ನಾಯ್ಕ ಸಮೇತ ಕುಮಾರಕೃಪಾ ಅತಿಥಿ ಗೃಹಕ್ಕೆ ಶನಿವಾರ ಹೋಗಿದ್ದ ಸಿಸಿಬಿ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದರು.

‘ಬಿಜೆಪಿಯ ದೆಹಲಿ ಪ್ರತಿನಿಧಿ ವೇಷದಲ್ಲಿದ್ದ ಚನ್ನ ನಾಯ್ಕ, ಕುಮಾರಕೃಪಾದಲ್ಲಿ ಉಳಿದುಕೊಂಡಿದ್ದ. ಇಲ್ಲಿಯೇ ದೂರುದಾರ ಗೋವಿಂದ ಬಾಬು ಪೂಜಾರಿ ಭೇಟಿಯಾಗಿದ್ದ. ಈ ಸಂಗತಿಯನ್ನು ಮರು ಸೃಷ್ಟಿಸಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಭೇಟಿಯ ಸಂಪೂರ್ಣ ಮಾಹಿತಿಯನ್ನು ಚನ್ನ ನಾಯ್ಕ ವಿವರಿಸಿದ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಶಾಮೀಲಾಗಿರುವ ಎಲ್ಲರ ಬಂಧನ: ಕಮಿಷನರ್ ದಯಾನಂದ್

‘ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಹಲವರು ಶಾಮೀಲಾಗಿದ್ದಾರೆ. ಸದ್ಯ 7 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಎಲ್ಲರನ್ನೂ ಬಂಧಿಸುತ್ತೇವೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದೊಂದು ವಂಚನೆ ಪ್ರಕರಣವಾಗಿರುವುದರಿಂದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ವಂಚನೆ ಹಣ ಎಲ್ಲಿದೆ ಎಂಬುದನ್ನು ಪತ್ತೆ ಮಾಡಿ, ಜಪ್ತಿ ಮಾಡಲಾಗುವುದು’ ಎಂದರು.

ದೂರುದಾರರ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನ

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ ದಾಖಲಾಗುವುದಕ್ಕೂ ಮುನ್ನ ದೂರುದಾರರ ಜೊತೆ ಚೈತ್ರಾ ಕುಂದಾಪುರ, ಗಗನ್ ಕಡೂರು ಹಾಗೂ ಇತರರು ಸಂಧಾನ ನಡೆಸಿದ್ದ ಸಂಗತಿ ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಆರೋಪಿ ಗಗನ್, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿ.ಸಿ.ಟಿ.ವಿ ದೃಶ್ಯಗಳನ್ನು ದೂರುದಾರ ಸಿಸಿಬಿ ಪೊಲೀಸರಿಗೆ ನೀಡಿದ್ದಾರೆ. ಅವುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಏಪ್ರಿಲ್ 24ರಂದು ಮಧ್ಯಾಹ್ನ ಚೈತ್ರಾ ಕುಂದಾಪುರ ಹಾಗೂ ಗಗನ್, ದೂರುದಾರರ ಕಚೇರಿಗೆ ಹೋಗಿ
ದ್ದರು. ಹಣ ವಾಪಸು ನೀಡುವ ಸಂಬಂಧ ಮಾತುಕತೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಗಗನ್, ‘ನಾನು ಸಾಯುತ್ತೇನೆ’ ಎಂದು ಹೇಳಿ ಬಾಟಲಿಯಲ್ಲಿದ್ದ ವಿಷ ಕುಡಿಯಲು ಯತ್ನಿಸಿದ್ದರು. ಸ್ಥಳದಲ್ಲಿದ್ದ ಕಚೇರಿ ಸಿಬ್ಬಂದಿ, ವಿಷದ ಬಾಟಲಿ ಕಸಿದುಕೊಂಡಿದ್ದರು. ನಂತರ, ಕುಸಿದು ಬಿದ್ದಿದ್ದ ಗಗನ್‌ನನ್ನು ಹೊರಗಡೆ ಕರೆದೊಯ್ದಿದ್ದರು. ಈ ದೃಶ್ಯ ವಿಡಿಯೊದಲ್ಲಿದೆ.

ಶಾಸಕರ ಹೆಸರು ಪ್ರಸ್ತಾಪ: ಆಡಿಯೊ ಹರಿದಾಟ

ಬಿಜೆಪಿ ಟಿಕೆಟ್ ವಂಚನೆ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರ ಹಾಗೂ ಪ್ರಸಾದ್ ಬೈಂದೂರು ನಡುವೆ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸುನೀಲ್‌ಕುಮಾರ್ ಎಂಬ ಹೆಸರು ಪ್ರಸ್ತಾಪವಾಗಿದೆ. ಆಡಿಯೊ ವಿವರ ಇಂತಿದೆ

ಪ್ರಸಾದ್ ಬೈಂದೂರು: ಹರಿ ಓಂ

ಚೈತ್ರಾ ಕುಂದಾಪುರ: ಹಾ. ಪ್ರಸಾದ್

ಪ್ರಸಾದ್: ಮುಟ್ಟಿಸಿದೆ

ಚೈತ್ರಾ: ಓ ಆಯ್ತಾ...

ಪ್ರಸಾದ್: ಹಾ..

ಚೈತ್ರಾ: ಇಷ್ಟ ಬೇಗ.. ಓ ಗಂಟೆ 6.22 ಆಯ್ತಲ್ಲ.. ಬೇಗ ಹೋಗಿದ್ರಾ?

ಪ್ರಸಾದ್: 6 ಗಂಟೆ ಹೇಳಿದ್ರಲ್ಲ. ಆರು ಮುಕ್ಕಾಲಿಗೆ ಮುಟ್ಟಿಸಿದೆ.

ಚೈತ್ರಾ: ಅವರಿಗೆ ಫೋನ್ ಮಾಡಿ ಹೇಳಬೇಕಿತ್ತು.

ಪ್ರಸಾದ್: ಹಾ. ಗಗನ್‌ಗೆ ಹೇಳಿದೆ. ಗಗನ್‌ಗೆ ಮಾಡಿ ನಿಮಗೆ ಮಾಡಿದೆ.

ಚೈತ್ರಾ: ಸರಿ

ಪ್ರಸಾದ್: ಹಾ. ಅವರ ಸಂಘಟನೆ ಇಬ್ಬರು ಹುಡುಗರು ಇದ್ದರು.

ಚೈತ್ರಾ: ಎಲ್ಲಿ ಇದ್ದರು?

ಪ್ರಸಾದ್: ಅದು... ಕಾರ್ಕಳದ ರಸ್ತೆಯಲ್ಲಿ

ಚೈತ್ರಾ: ಬಹುಶಃ. ಸುನೀಲ್ ಕುಮಾರ್ ಮನೆಗೆ ಹೋಗ್ತಾರಾ?

ಪ್ರಸಾದ್: ಸುನೀಲ್‌ಕುಮಾರ್ ಮನೆಗಾ?

ಚೈತ್ರಾ: ಆ ಮತ್ತೆ ಅಲ್ಲಿ ಯಾಕೆ ಬರ್ತಾರೆ

ಪ್ರಸಾದ್: ಒಕೆ ಹೇಳ್ಬಿಡಿ. ನಾನು ಮಾಡಿದ್ದೇನೆ.

ಚೈತ್ರಾ: ಆಯ್ತು ಇನ್ನೊಂದು ಸಲ ಮಾಡಿ ಹೇಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT