ಬೆಂಗಳೂರು: ಪತಿಯನ್ನು ಕಪ್ಪು ಚರ್ಮದವನು ಎಂದು ಜರೆಯುತ್ತಿದ್ದ ಪತ್ನಿಯ ಧೋರಣೆಯನ್ನು ‘ಕ್ರೌರ್ಯ’ ಎಂದು ಪರಿಗಣಿಸಿರುವ ಹೈಕೋರ್ಟ್, ದಂಪತಿಯ ಮದುವೆಯನ್ನು ಅಸಿಂಧುಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ.
ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ (ಈಗ ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ) ಹಾಗೂ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಇತ್ತೀಚೆಗೆ ಈ ಆದೇಶ ನೀಡಿದ್ದು, ‘ಒಂದು ವೇಳೆ ಪತ್ನಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರೆ ಕೌಟುಂಬಿಕ ನ್ಯಾಯಾಲಯ ಅದನ್ನು ಪರಿಶೀಲಿಸಿ ನಿರ್ಧರಿಸಬೇಕು‘ ಎಂದು ತಿಳಿಸಿದೆ.
‘ಸಕಾರಣ ಇಲ್ಲದಿದ್ದರೂ ಪತ್ನಿ, ಪತಿಯ ಜೊತೆ ವಾಸ ಮಾಡದೆ ತವರು ಮನೆ ಸೇರಿದ್ದಾರೆ. ಪತಿಯ ವಿರುದ್ಧ ಅಕ್ರಮ ಸಂಬಂಧದ ಸುಳ್ಳು ಆರೋಪ ಹೊರಿಸಿದ್ದಾರೆ. ಇದು ನಿಸ್ಸಂದೇಹವಾಗಿ ಕ್ರೌರ್ಯ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಪತಿಯನ್ನು ಕಪ್ಪು ಚರ್ಮದವನು ಎಂದು ಸದಾ ಹೀಯಾಳಿಸುವ ಮೂಲಕ ಪತ್ನಿ ಅವಮಾನ ಮಾಡಿರುವುದು ಈ ಪ್ರಕರಣದಲ್ಲಿ ನಿಚ್ಚಳವಾಗಿ ಕಂಡುಬಂದಿದೆ‘ ಎಂದು ಹೇಳಿರುವ ನ್ಯಾಯಪೀಠ, ಪತಿಗೆ ವಿಚ್ಛೇದನ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿದ್ದು, ಪತಿಯ ಮೇಲ್ಮನವಿ ಪುರಸ್ಕರಿಸಿ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ಡಿಕ್ರಿ ಮಂಜೂರಾತಿಗೆ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.