ಬೆಂಗಳೂರು: ಬಿಎಂಟಿಸಿ ಇಬ್ಬರು ಸಿಬ್ಬಂದಿಗೆ ಕೋವಿಡ್–19 ದೃಢಪಟ್ಟಿದ್ದು, ಚಾಲಕ ಮತ್ತು ನಿರ್ವಾಹಕರ ಭಯಕ್ಕೆ ಕಾರಣವಾಗಿದೆ.
ಕೋರಮಂಗಲ ಘಟಕದ ಚಾಲಕ ಮತ್ತು ಇಂದಿರಾನಗರ ಘಟಕದ ಸಂಚಾರ ನಿಯಂತ್ರಕರಿಗೆ ಸೋಂಕಿರುವುದು ಖಚಿತವಾಗಿದೆ.ಇಬ್ಬರ ಸೋಂಕಿನ ಮೂಲಗಳು ಸದ್ಯಕ್ಕೆ ತಿಳಿದು ಬಂದಿಲ್ಲ.ಈ ಇಬ್ಬರೂ ಅನಾರೋಗ್ಯಕ್ಕೆ ಈಡಾಗಿದ್ದ ಕಾರಣ ಹೆಚ್ಚು ಜನರ ಸಂಪರ್ಕಕ್ಕೆ ಬಂದಿಲ್ಲ. ಅವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯವನ್ನು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಮುಂದುವರಿಸಿದೆ.
ಸಂಚಾರ ನಿಯಂತ್ರಕರು ಜೂ.6ರ ನಂತರ ಕರ್ತವ್ಯಕ್ಕೆ ಹಾಜರಾಗಿಲ್ಲ. ಕೋರಮಂಗಲ ಘಟಕದ ಚಾಲಕ ಜೂ.11ರ ನಂತರ ಕರ್ತವ್ಯಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರಕ್ಷತೆ ಇಲ್ಲ: ಸಿಬ್ಬಂದಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಚಾಲನಾ ಸಿಬ್ಬಂದಿ ಘಟಕದಲ್ಲೇ ಭಾನುವಾರ ಪ್ರತಿಭಟನೆ ನಡೆಸಿದರು.
‘ಮಾಸ್ಕ್, ಸ್ಯಾನಿಟೈಸರ್ ನೀಡಿಲ್ಲದಿದ್ದರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇವೆ. ಮನೆಯಲ್ಲೇ ಇದ್ದರೆ ಸಂಬಳ ಕಡಿತಗೊಂಡು ಜೀವನ ನಿರ್ವಹಣೆ ಕಷ್ಟವಾಗಲಿದೆ. ಸೋಂಕು ಸಹೋದ್ಯೋಗಿಗಳಲ್ಲೇ ಕಾಣಿಸಿಕೊಳ್ಳುತ್ತಿರುವುದು ಭಯ ಹುಟ್ಟಿಸಿದೆ’ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದರು.