ಬೆಂಗಳೂರು: ‘ಶ್ರೇಷ್ಠ ಲೇಖಕರು ಹಾಗೂ ಕವಿಗಳು ನಮ್ಮಲ್ಲಿ ಸಾಕಷ್ಟು ಇದ್ದಾರೆ. ಆದರೆ, ಪ್ರೊ.ಕೆ.ಎಸ್. ನಿಸಾರ್ ಅಹಮದ್ ಸೇರಿದಂತೆ ಕೆಲವರಷ್ಟೇ ತಮ್ಮ ಬರಹಗಳಿಂದ ಗ್ರಾಮೀಣ ಜನರನ್ನು ತಲುಪಿದ್ದಾರೆ’ ಎಂದುವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಆಯ್ದ ಕವಿತೆಗಳ 5 ಅನುವಾದಿತ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
‘ನಿಸಾರ್ ಅಹಮದ್ ವಿಶಿಷ್ಟ ಶೈಲಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಅವರ ಕವಿತೆಗಳು ಗ್ರಾಮೀಣ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಬರುವ ದಿನಗಳಲ್ಲಿ ಅವರನ್ನು ಕೇಂದ್ರವನ್ನಾಗಿಸಿಕೊಂಡು ಕವಿತೆಗಳ ಆಮೂಲಾಗ್ರ ಚರ್ಚೆ ನಡೆಯಬೇಕು’ ಎಂದು ತಿಳಿಸಿದರು.
ಉರ್ದು ಕವಿ ಖಲೀಲ್ ಮಾಮೂನ್, ‘ನಿತ್ಯೋತ್ಸವ ಕವಿತೆಯ ಮೂಲಕ ನಿಸಾರ್ ಅವರು ರಾಷ್ಟ್ರದ ಶ್ರೇಷ್ಠ ಕವಿಗಳ ಪಂಕ್ತಿಗೆ ಸೇರಿದ್ದಾರೆ. ‘ಕುರಿಗಳು, ಸಾರ್, ಕುರಿಗಳು’ ಕವನ ಅವರ ಪ್ರತಿಭೆ ಅನಾವರಣ ಮಾಡಿದೆ. ಇಂಥ ಕವನಗಳು ಎಲ್ಲ ಭಾಷೆಗಳಿಗೆ ಅನುವಾದವಾಗಬೇಕು’ ಎಂದರು.
ಲೇಖಕ ಸ.ರಘುನಾಥ, ‘ಕೆ.ಎಸ್.ನ ಅವರ ಕವಿತೆಗಳಲ್ಲಿ ಮಲ್ಲಿಗೆಯ ಕಂಪು ಇದ್ದ ಹಾಗೇ ನಿಸಾರ್ ಅಹಮದ್ ಅವರ ಕವಿತೆಗಳಲ್ಲಿ ತಾಳೆ ಹೂ (ಕೇದಿಗೆ) ಗಮವಿದೆ. ಕನ್ನಡ ಸಾಹಿತ್ಯದಲ್ಲಿ ನವ್ಯ ಮತ್ತು ನವೋದಯ ಕಾಲಘಟ್ಟದಲ್ಲಿ ಉದ್ಭವಿಸಿದ್ದ ಜಿದ್ದಾಜಿದ್ದಿ ತೆಲುಗು ಸಾಹಿತ್ಯದಲ್ಲೂ ಉಂಟಾಗಿತ್ತು’ ಎಂದರು.
ಪುಸ್ತಕ: ಕಾಟ್ ಬಿಟ್ವೀನ್ ದಿ ವರ್ಲ್ಡ್ ಆಫ್ ಬೈನರೀಸ್ (ದ್ವಂದ್ವಗಳ ಲೋಕದಲ್ಲಿ ದ್ವಂದ್ವಾತೀತ ಶೋಧ)