ಬೆಂಗಳೂರು: ನಾಗವಾರ ಬಳಿಯ ಸಾರಾಯಿಪಾಳ್ಯದಲ್ಲಿ ಮಂಗಳವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು, ಸಲ್ಮಾನ್ ಖಾನ್ (11) ಎಂಬಾತ ದುರ್ಮರಣಕ್ಕೀಡಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು, ನೀರಿನ ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
‘ಆಟೊ ಚಾಲಕ ಅಮ್ಜದ್ ಎಂಬುವರ ಮಗನಾಗಿದ್ದ ಸಲ್ಮಾನ್, ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ. ಮಂಗಳವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದು, ಸಂಬಂಧಿಕರೊಬ್ಬರಿಗೆ ಊಟ ನೀಡಲು ಸೈಕಲ್ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಅತೀ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದ ಚಾಲಕ, ಸಲ್ಮಾನ್ ತೆರಳುತ್ತಿದ್ದ ಸೈಕಲ್ಗೆ ಡಿಕ್ಕಿ ಹೊಡೆಸಿದ್ದ. ತೀವ್ರ ಗಾಯಗೊಂಡ ಸಲ್ಮಾನ್ ಸ್ಥಳದಲ್ಲೇ ಮೃತಪಟ್ಟ. ಟ್ರ್ಯಾಕ್ಟರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದರು.
‘ಪ್ರತಿಭಟನೆ ನಡೆಸಿದ ಸ್ಥಳೀಯರು, ಟ್ರ್ಯಾಕ್ಟರ್ಗೆ ಬೆಂಕಿ ಹಚ್ಚಿದರು. ಟ್ರ್ಯಾಕ್ಟರ್ ಹೊತ್ತಿ ಉರಿಯಿತು.
ಹಲವು ಬಾರಿ ಎಚ್ಚರಿಕೆ: ‘ಸ್ಥಳೀಯ ನಿವಾಸಿಯೇ ಆದ ಚಾಲಕ ಟ್ರ್ಯಾಕ್ಟರ್ ಅನ್ನು ಹಲವು ದಿನಗಳಿಂದ ವೇಗವಾಗಿ ಓಡಿಸುತ್ತಿದ್ದ. ಮಕ್ಕಳು ಹಾಗೂ ವೃದ್ಧರು ಓಡಾಡುವ ರಸ್ತೆಯಲ್ಲಿ ನಿಧಾನವಾಗಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುವಂತೆ ಆತನಿಗೆ ಎಚ್ಚರಿಕೆ ನೀಡಲಾಗಿತ್ತು’ ಎಂದು ಸ್ಥಳೀಯರು ಹೇಳಿದರು.