ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ (30) ಅವರ ನಿಗೂಢ ಸಾವಿನ ಬಗ್ಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಫ್ಲ್ಯಾಟ್ನಲ್ಲಿ ಶನಿವಾರ ಪರಿಶೀಲನೆ ನಡೆಸಿದರು.
ಯಡಿಯೂರಪ್ಪ ಪುತ್ರಿ ಪದ್ಮಾವತಿಅವರ ಮಗಳಾಗಿದ್ದ ವೈದ್ಯೆಸೌಂದರ್ಯ, ಪತಿ ಡಾ.ನೀರಜ್ ಹಾಗೂ 9 ತಿಂಗಳ ಮಗು ಜೊತೆ ವಾಸವಿದ್ದರು. ವಸಂತನಗರದಲ್ಲಿರುವ ಲೆಗೆಸಿ ಅಪಾರ್ಟ್ ಮೆಂಟ್ ಸಮುಚ್ಚಯದ ಫ್ಲ್ಯಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೌಂದರ್ಯ ಅವರ ಮೃತದೇಹ ಶುಕ್ರವಾರ (ಜ. 28) ಸಿಕ್ಕಿತ್ತು.
‘ಪತಿ ನೀರಜ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೌಂದರ್ಯ ಅವರದ್ದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗು ತ್ತಿದೆ. ಆದರೆ, ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಶುಕ್ರ ವಾರವೇ ಪೂರ್ಣಗೊಳಿಸಲಾಗಿದೆ. ಕುಟುಂಬದವರು ಅಂತ್ಯಕ್ರಿಯೆಯನ್ನೂ ಮುಗಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸೌಂದರ್ಯ ತಾಯಿ ಪದ್ಮಾವತಿ, ತಂದೆ ವಿರೂಪಾಕ್ಷಪ್ಪ ಹಾಗೂನೀರಜ್ ಅವರ ಕುಟುಂಬದವರ ಹೇಳಿಕೆ ಪಡೆಯ ಬೇಕಿದೆ’ ಎಂದೂ ಮೂಲಗಳು ತಿಳಿಸಿವೆ.
‘ಫ್ಲ್ಯಾಟ್ನಲ್ಲಿ ಶನಿವಾರ ಮಹಜರು ಪ್ರಕ್ರಿಯೆ ನಡೆಸಲಾಯಿತು. ಅಕ್ಕ–ಪಕ್ಕದ ನಿವಾಸಿಗಳ ಹೇಳಿಕೆಯನ್ನೂ ಪಡೆಯಲಾಯಿತು. ಘಟನಾ ಸ್ಥಳದಲ್ಲಿ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಹೀಗಾಗಿ, ಸಾವಿನ ಕಾರಣ ನಿಗೂಢ ವಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದರೆ, ನಿಖರ ಕಾರಣ ತಿಳಿಯಲಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.