ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ | FSL ವರದಿ ಬಿಡುಗಡೆಗೆ ಸಿ.ಟಿ. ರವಿ ಆಗ್ರಹ

Published 6 ಮಾರ್ಚ್ 2024, 15:29 IST
Last Updated 6 ಮಾರ್ಚ್ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ಪ್ರಕರಣದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಆಗ್ರಹಿಸಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಘೋಷಣೆ ಕೂಗಿದವರು ಯಾರೋ ಚೇಲಾಗಳು ಇರಬಹುದು ಅಂದುಕೊಂಡಿದ್ದೆವು. ಆದರೆ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಹಲವು ನಾಯಕರನ್ನು ಆರೋಪಿಗಳು ತಬ್ಬಿಕೊಂಡು ನಡೆಯುತ್ತಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆರೋಪಿಗಳಿಗೂ ಕಾಂಗ್ರೆಸ್‌ ನಾಯಕರಿಗೂ ಅಪ್ಪುಗೆಯ ನಂಟು ಇದೆ ಎಂಬುದು ಈಗ ಗೊತ್ತಾಗಿದೆ’ ಎಂದರು.

‘ಈ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅವರಿಗೆ ಕಾಂಗ್ರೆಸ್‌ ನಾಯಕರ ಜತೆ ಅಪ್ಪುಗೆ ನಂಟು ಇರುವ ಕಾರಣಕ್ಕಾಗಿಯೇ ಎಫ್‌ಎಸ್‌ಎಲ್‌ ವರದಿಯನ್ನು ಬಿಡುಗಡೆ ಮಾಡಿಲ್ಲ ಎಂಬ ಅನುಮಾನ ಇದೆ. ತಕ್ಷಣವೇ ವರದಿಯನ್ನು ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆಯನ್ನೇ ಕೂಗಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಾದಿಸಿದ್ದರು. ಈಗ ವರದಿ ಸರ್ಕಾರದ ಬಳಿ ಇದ್ದರೂ ಬಹಿರಂಗಪಡಿಸಲು ಯಾವ ಅಡ್ಡಿ ಇದೆ’ ಎಂದು ಕೇಳಿದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ ಘಟನೆ ಕುರಿತು ರಾಜ್ಯದ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಕೆಲವರು ಬಾಂಬ್‌ ಇರಿಸಿದ ವ್ಯಕ್ತಿಯ ಜತೆ ಬಿಜೆಪಿಗೆ ನಂಟು ಇದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಘಟನೆಗಳು ನಡೆದಾಗ ಬಿಜೆಪಿಯನ್ನು ಟೀಕಿಸುವುದು ಕಾಂಗ್ರೆಸ್‌ನವರಿಗೆ ಇರುವ ಹಳೆಯ ರೋಗ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT