ಹೆಸರಘಟ್ಟ: ಸಮೀಪದ ತೋಟಗೆರೆ ಬಸವಣ್ಣ ದೇವಸ್ಥಾನ ಕ್ಷೇತ್ರದಲ್ಲಿ ಮಾರ್ಚ್ 1ರಿಂದ ಎಂಟು ದಿನ ಜಿಲ್ಲಾ ಮಟ್ಟದ ದನಗಳ ಜಾತ್ರೆ ನಡೆಯಲಿದೆ ಎಂದು ಸಿಎನ್ಆರ್ ಹಿತಚಿಂತನಾ ಚಾರಿಟೆಬಲ್ ಟ್ರಸ್ಟ್ ತಿಳಿಸಿದೆ.
ದನಗಳ ಜಾತ್ರೆಯಲ್ಲಿ ವಿವಿಧ ತಳಿಗಳ ಜಾನುವಾರು ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಾತ್ರೆಗೆ ಉಚಿತ ಪ್ರವೇಶವಿದ್ದು, ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಉತ್ತಮ ರಾಸುಗಳಿಗೆ ಪ್ರಥಮ ಬಹುಮಾನವಾಗಿ 100 ಗ್ರಾಂ ಬೆಳ್ಳಿ, ದ್ವಿತೀಯ ಬಹುಮಾನ 50 ಗ್ರಾಂ ಬೆಳ್ಳಿ ತೃತೀಯ ಬಹುಮಾನದ ರೂಪದಲ್ಲಿ 25 ಗ್ರಾಂ ಬೆಳ್ಳಿ ನೀಡಲಾಗುವುದು. ಜಾತ್ರೆಯಲ್ಲಿ 500ಕ್ಕೂ ಹೆಚ್ಚು ಜಾನುವಾರುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಟ್ರಸ್ಟ್ ಅಧ್ಯಕ್ಷ ವಿ.ರಾಮಸ್ವಾಮಿ ಮಾಹಿತಿ ನೀಡಿದರು.
ಟ್ರಸ್ಟ್ ವತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ರೈತರಿಗೆ ಶಲ್ಯ ವಿತರಣೆ ಮತ್ತು ಎಲ್ಲ ಜಾನುವಾರುಗಳಿಗೆ ಬಾರ್ಕೋಲು, ಕೊರಳ ಗೆಜ್ಜೆ, ದಂಡೆ, ಶಂಖ, ವಿತರಣೆ ಮಾಡಲಾಗುವುದು ಎಂದರು.
ಐದು ಎಕರೆ ಪ್ರದೇಶದಲ್ಲಿ ಜಾನುವಾರುಗಳಿಗೆ ಸ್ಥಳಾವಕಾಶ ಕಲ್ಪಿಸಿದ್ದು ಬೆಂಗಳೂರು ಉತ್ತರ, ನೆಲಮಂಗಲ, ಮಾಗಡಿ, ತುಮಕೂರು, ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕುಗಳ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.