ಬೆಂಗಳೂರು: ಖಾಸಗಿ ಕಂಪನಿ ನೌಕರರೊಬ್ಬರಿಂದ ₹ 50 ಸಾವಿರ ಲಂಚ ಸ್ವೀಕರಿಸುತ್ತಿದ್ದ ಪೆಟ್ರೋಲಿಯಂ ಮತ್ತು ಎಕ್ಸ್ಪ್ಲೋಸಿವ್ ಸೇಫ್ಟಿ ಸಂಸ್ಥೆ (ಪಿಇಎಸ್ಒ) ಮಂಗಳೂರಿನ ಉಪ ಮುಖ್ಯ ಕಂಟ್ರೋಲರ್ (ಸೇಫ್ಟಿ) ಎಸ್.ಎಂ. ಮನ್ನನ್ ಅವರನ್ನು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಅಧಿಕಾರಿಗೆ ಲಂಚ ನೀಡಿದ ಆರೋಪಕ್ಕೆ ಒಳಗಾಗಿರುವ ಬೆಳಗಾವಿಯ ಸಂಘ್ವಿ ಸಿಲಿಂಡರ್ ಪ್ರೈವೇಟ್ ಲಿ. ನೌಕರ ರಿಷಬ್ ದೇಸಾಯಿ ಅವರನ್ನೂ ಬಂಧಿಸಲಾಗಿದೆ. ಬೆಳಗಾವಿ ಮೂಲದ ಸಿಲಿಂಡರ್ ಕಂಪನಿಯ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಪರಿಶೀಲನಾ ವರದಿಯನ್ನು ನಾಗಪುರದಲ್ಲಿರುವ ಪಿಇಎಸ್ಒ ಕೇಂದ್ರ ಕಚೇರಿಗೆ ಸಲ್ಲಿಸಲು ಅಧಿಕಾರಿ ₹ 50 ಸಾವಿರ ಲಂಚಕ್ಕೆ ಒತ್ತಾಯಿಸಿದ್ದರು.
ಆದರೆ, ಕಂಪನಿ ನೌಕರರ ಮೂಲಕ ಆರೋಪಿ ಅಧಿಕಾರಿಗೆ ಲಂಚದ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಮನ್ನನ್, ದೇಸಾಯಿ ಅವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಬಲೆ ಬೀಸಿ ಬಂಧಿಸಿತು.
ಬಂಧಿತ ಆರೋಪಿಗಳನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.