ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ ವಿಳಾಸ ಬಳಸಿಕೊಂಡು ಸ್ವಿಗ್ಗಿ ಆ್ಯಪ್ನಲ್ಲಿ ಆಹಾರ ಆರ್ಡರ್ ಮಾಡಿದ್ದ ದುಷ್ಕರ್ಮಿಗಳು, ಆಹಾರ ಡೆಲಿವರಿ ಮಾಡಲು ಬಂದಿದ್ದ ಎಚ್.ವಿ. ಮಧು ಎಂಬುವರನ್ನು ಸುಲಿಗೆ ಮಾಡಿದ್ದಾರೆ.
ಈ ಸಂಬಂಧ ಕಾಮಾಕ್ಷಿಪಾಳ್ಯದ ರಂಗನಾಥಪುರದ ಮಧು ಅವರು ಕಾಟನ್ಪೇಟೆ ಠಾಣೆಗೆ ದೂರು ನೀಡಿದ್ದಾರೆ.
‘ಇದೇ 3ರಂದು ಆ್ಯಪ್ನಲ್ಲಿ ಆಹಾರ ಆರ್ಡರ್ ಮಾಡಿದ್ದ ಅಜರುದ್ದೀನ್ ಎಂಬಾತ, ‘ಬೆಂಗಳೂರು ಸಿಸಿಬಿ ಕಚೇರಿ, ಸುಲ್ತಾನ್ಪೇಟೆ’ ಎಂಬ ವಿಳಾಸ ನೀಡಿದ್ದ. ಅದರಂತೆ ಆಹಾರ ತೆಗೆದುಕೊಂಡು ಸಂಜೆ 4ಕ್ಕೆ ಸಿಸಿಬಿ ಕಚೇರಿ ಬಳಿ ಹೋಗಿದ್ದೆ’ ಎಂದು ಮಧು ದೂರಿನಲ್ಲಿ ತಿಳಿಸಿದ್ದಾರೆ.
‘ಸಿಸಿಬಿ ಕಚೇರಿ ಸಮೀಪದಲ್ಲೇ ನಿಂತು ಅಜರುದ್ದೀನ್ಗೆ ಕರೆ ಮಾಡಿದ್ದೆ. ಕಚೇರಿ ಬಳಿಯ ಗ್ಯಾಸ್ ಏಜೆನ್ಸಿಯೊಂದರ ಬಳಿ ಇರುವುದಾಗಿ ಆತ ಹೇಳಿದ್ದ. ಸ್ಥಳಕ್ಕೆ ಹೋಗಿ ಆಹಾರ ನೀಡಲು ಮುಂದಾಗಿದ್ದೆ. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದ ಆತ, ಆರ್ಡರ್ ರದ್ದುಪಡಿಸುವುದಾಗಿ ಹೇಳಿ ಮೊಬೈಲ್ ನೋಡಲಾರಂಭಿಸಿದ್ದ’
‘ಕೆಲ ನಿಮಿಷದಲ್ಲೇ ನನ್ನ ಬೈಕ್ನ ಹ್ಯಾಂಡಲ್ನ ಹೋಲ್ಡರ್ನಲ್ಲಿ ಇಟ್ಟಿದ್ದ ₹12 ಸಾವಿರ ಮೌಲ್ಯದ ಮೊಬೈಲ್ನ್ನು ಕಿತ್ತುಕೊಂಡು ಓಡಿಹೋದ. ಆತನ ಜೊತೆಗಿದ್ದ ಮತ್ತೊಬ್ಬ ಆರೋಪಿ ಸಹ ಪರಾರಿಯಾದ’ ಎಂದು ಮಧು ದೂರಿನಲ್ಲಿ ತಿಳಿಸಿದ್ದಾರೆ.
ಕಾಟನ್ಪೇಟೆ ಪೊಲೀಸರು, ‘ಸಿಸಿಬಿ ಕಚೇರಿ ಹೆಸರು ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಲಾಗಿದೆ. ಇದರಲ್ಲಿ ಸ್ಥಳೀಯ ಯುವಕರು ಭಾಗಿಯಾಗಿರುವ ಅನುಮಾನವಿದೆ’ ಎಂದು ಹೇಳಿದರು.