ಬೆಂಗಳೂರು: ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ನಗರದಲ್ಲಿ ಗುರುವಾರ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಧರ್ಮಗುರುಗಳು ಸಂದೇಶ ನೀಡಿದರು.
ಕಲಾಸಿಪಾಳ್ಯ, ಚಾಮರಾಜಪೇಟೆ, ಶಿವಾಜಿನಗರ, ಬಿ.ಟಿ.ಎಂ ಲೇಔಟ್, ಪಾದರಾಯನಪುರ, ಹೆಬ್ಬಾಳ, ಆರ್.ಟಿ. ನಗರ, ಶಾಂತಿನಗರ, ಮೈಸೂರು ರಸ್ತೆ, ಜಯನಗರ, ಲಾಲ್ಬಾಗ್ ರಸ್ತೆ, ಮಾಗಡಿ ರಸ್ತೆ, ಕಮ್ಮಗೊಂಡನಹಳ್ಳಿ ಸೇರಿದಂತೆ ನಗರದ ವಿವಿಧೆಡೆಯ ಪ್ರಮುಖ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಮಸೀದಿಗಳ ಎದುರು ಗುಲಾಬಿ ಹೂವಿನ ಮಾರಾಟದ ವ್ಯವಸ್ಥೆಯಿತ್ತು. ಪುಟ್ಟ ಮಕ್ಕಳು, ದೊಡ್ಡವರು ಹೊಸಬಟ್ಟೆ, ಟೋಪಿಯೊಂದಿಗೆ ಕಂಗೊಳಿಸಿದರು. ಮಕ್ಕಳು ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಸಮಾಜದ ಬಡವರಿಗೆ ದಾನ ನೀಡಲಾಯಿತು.
ಹೊಸ ಬಟ್ಟೆ ತೊಟ್ಟು ಶುಭ ಕೋರಿದರು. ಈ ಹಬ್ಬ ತ್ಯಾಗದ ಪ್ರತೀಕವಾಗಿದ್ದು, ಕುರಿ ಬಲಿ ನೀಡಲಾಯಿತು. ನೆರೆ ಹೊರೆಯವರು, ಬಡವರಿಗೆ ತಮ್ಮ ಶಕ್ತಿಗೆ ಅನುಸಾರವಾಗಿ ಮಾಂಸ ದಾನ ಮಾಡಿದರು. ಹಬ್ಬದೂಟ ಮಾಡಿ ಸಂಬಂಧಿಕರ ಜೊತೆಗೆ, ಸ್ನೇಹಿತರ ಜೊತೆಗೆ ಹಂಚಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅನೇಕ ಸಚಿವರು, ಶಾಸಕರು ಶುಭ ಹಾರೈಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಪುಟಾಣಿ – ಪ್ರಜಾವಾಣಿ ಚಿತ್ರ
ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ತಂದೆ–ಮಗಳು –ಪ್ರಜಾವಾಣಿ ಚಿತ್ರ
ಪ್ರಾರ್ಥನೆ ಮಾಡುವ ಕ್ರಮವನ್ನು ಮಗುವಿಗೆ ಕಲಿಸುತ್ತಿರುವುದನ್ನು ಇನ್ನೊಂಡು ಮಗು ಕುತೂಹಲದಿಂದ ನೋಡುತ್ತಿರುವುದು –ಪ್ರಜಾವಾಣಿ ಚಿತ್ರ