ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಹೋಗುವ ಯುವಕರ ತಬ್ಬಿಕೊಂಡು ಸರಗಳವು: ಜೂಲಿ ಬಂಧನ

Last Updated 12 ಜುಲೈ 2022, 3:16 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯಲ್ಲಿ ಹೋಗುವ ಯುವಕರನ್ನು ತಬ್ಬಿಕೊಂಡು ಅವರ ಚಿನ್ನದ ಸರ ಕಳ್ಳತನ ಮಾಡುತ್ತಿದ್ದ ಆರೋಪಿ ಜೂಲಿ ಅಲಿಯಾಸ್ ಕೃಷ್ಣ (40) ಎಂಬುವವರನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

‘ಸುಂಕದಕಟ್ಟೆ ನಿವಾಸಿ ಜೂಲಿ ತೃತೀಯ ಲಿಂಗಿ. ಐಷಾರಾಮಿ ಕಾರು ಹೊಂದಿರುವ ಯುವಕರನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು. ಇವರಿಂದ 44 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಉದ್ಯಮಿ ವಿಶ್ವಾಸ್ ಎಂಬುವವರು ಸ್ನೇಹಿತರ ಜೊತೆ ಜುಲೈ 5ರ ರಾತ್ರಿ ಬ್ರಿಗೇಡ್ ರಸ್ತೆಗೆ ಬಂದಿದ್ದರು. ಬಾರ್ ಆ್ಯಂಡ್‌ ರೆಸ್ಟೊರೆಂಟ್‌ವೊಂದರಲ್ಲಿ ಊಟ ಮುಗಿಸಿಕೊಂಡು ಕಾರು ನಿಲ್ಲಿಸಿದ್ದ ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದರು.’

‘ಸ್ಥಳದಲ್ಲಿದ್ದ ಆರೋಪಿ ಡ್ರಾಪ್ ಕೇಳುವ ನೆಪದಲ್ಲಿ ವಿಶ್ವಾಸ್‌ ಅವರನ್ನು ಮಾತನಾಡಿಸಿದ್ದರು. ನಂತರ ಒಂದು ನಿಮಿಷ ಗಟ್ಟಿಯಾಗಿ ತಬ್ಬಿಕೊಂಡಿದ್ದರು. ಅದೇ ವೇಳೆಯೇ ಕೊರಳಲ್ಲಿದ್ದ ₹1 ಲಕ್ಷ ಮೌಲ್ಯದ ಚಿನ್ನದ ಸರ ಬಿಚ್ಚಿಕೊಂಡು ಸ್ಥಳದಿಂದ ಹೊರಟು ಹೋಗಿದ್ದರು. ಕೆಲ ನಿಮಿಷಗಳ ನಂತರ ಚಿನ್ನದ ಸರ ಕಂಡಿರಲಿಲ್ಲ. ತಬ್ಬಿಕೊಂಡವರ ಮೇಲೆಯೇ ಅನುಮಾನ ವ್ಯಕ್ತಪಡಿಸಿ ವಿಶ್ವಾಸ್ ದೂರು ನೀಡಿದ್ದರು’ ಎಂದು ತಿಳಿಸಿವೆ.

‘ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಹಾಗೂ ಇತರೆ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು. ಇದೇ ಆರೋಪಿ ಎರಡು ಕಡೆ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸ್ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT