ಬೆಂಗಳೂರು: ಚಾಮರಾಜಪೇಟೆಯ ಸೀತಾಪತಿ ಅಗ್ರಹಾರ 4ನೇ ಅಡ್ಡರಸ್ತೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದ ಸ್ಥಳವನ್ನು ನೋಡಿದರೆ ನಡುಕ ಹುಟ್ಟಿಸುವಂತ್ತಿತ್ತು.
ಕಟ್ಟಡದ ಕೆಳಮಹಡಿಯಲ್ಲಿ ಗೋದಾಮು ಇದೆ. ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ಕುಟುಂಬವೊಂದು ವಾಸವಿದೆ. ಸ್ಫೋಟ ಸಂಭವಿಸಿದ್ದ ಸಂದರ್ಭದಲ್ಲಿ ಅಜ್ಜಿ ಸಾರಮ್ಮ ಹಾಗೂ ಇಬ್ಬರು ಮೊಮ್ಮಕ್ಕಳು ಮಾತ್ರ ಮನೆಯಲ್ಲಿದ್ದರು. ಸ್ಫೋಟದಿಂದಾಗಿ ಮೂವರು ಅಪಾಯಕ್ಕೆ ಸಿಲುಕಿದ್ದರು. ಅವರನ್ನು ಸ್ಥಳೀಯರಿಬ್ಬರು ಹೊರಗೆ ಕರೆತಂದು ರಕ್ಷಿಸಿದ್ದಾರೆ.
‘ದೊಡ್ಡದಾಗಿ ಶಬ್ದ ಕೇಳಿಸಿತು. ತುಂಬಾ ಭಯವಾಯಿತು. ಆಟವಾಡುತ್ತಿದ್ದ ಮೊಮ್ಮಕ್ಕಳನ್ನು ನನ್ನತ್ತ ಕರೆದುಕೊಂಡೆ. ಎಲ್ಲರೂ ಸೇರಿ ‘ಕಾಪಾಡಿ..ಕಾಪಾಡಿ..’ ಎಂದು ಕೂಗಾಡಿದೆವು. ಇಬ್ಬರು ವ್ಯಕ್ತಿಗಳು, ಮನೆಯೊಳಗೆ ಬಂದು ನಮ್ಮನ್ನು ಹೊರಗೆ ಕರೆದೊಯ್ದರು’ ಎಂದು ಸಾರಮ್ಮ ಹೇಳಿದರು.
‘ನಾಲ್ಕು ವರ್ಷಗಳಿಂದ ಈ ಕಟ್ಟಡದಲ್ಲಿ ವಾಸವಿದ್ದೇವೆ. ನೆಲಮಹಡಿಯಲ್ಲಿ ಪಟಾಕಿ ಸಂಗ್ರಹಿಸುತ್ತಿದ್ದ ಮಾಹಿತಿ ಇರಲಿಲ್ಲ. ಸ್ಫೋಟದಿಂದ ಮನೆಯ ಕಿಟಕಿ ಗಾಜುಗಳು ಒಡೆದಿವೆ. ಪಾತ್ರೆಗಳು ಹಾಗೂ ಪೀಠೋಪಕರಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು’ ಎಂದೂ ತಿಳಿಸಿದರು.
‘ಗೋದಾಮು ಪಕ್ಕದಲ್ಲೇ ಚಹಾ ಅಂಗಡಿ ಇತ್ತು. ನಿತ್ಯವೂ ಕಾರ್ಮಿಕರು ಬಂದು ಚಹಾ ಕುಡಿದು ಹೋಗುತ್ತಿದ್ದರು. ಸ್ಫೋಟದಿಂದಾಗಿ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ’ ಎಂದು ಸ್ಥಳೀಯರು ಹೇಳಿದರು.
‘ಗುರುವಾರ ಬೆಳಿಗ್ಗೆ ಚಹಾ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ರಸ್ತೆಯಲ್ಲೂ ಸಾರ್ವಜನಿಕರ ಓಡಾಟ ವಿರಳವಾಗಿತ್ತು. ಹೆಚ್ಚಿದ್ದರೆ, ಸಾವು–ನೋವಿನ ಪ್ರಮಾಣವೂ ಜಾಸ್ತಿ ಇರುತ್ತಿತ್ತು’ ಎಂದರು.