ಬೆಂಗಳೂರು: ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
'ಆನಂದ್ಕುಮಾರ್ ಅಲಿಯಾಸ್ ನಂದ (18), ಸಂತೋಷ್ ಕುಮಾರ್ (18), ಜಿ. ನಿತಿನ್ ಅಲಿಯಾಸ್ ಬಿಳೆ (20) ಹಾಗೂ ಎನ್. ನಿತಿನ್ಕುಮಾರ್ (18) ಬಂಧಿತರು. ಇನ್ನೊಬ್ಬ ಬಾಲಕ’ ಎಂದು ಪೊಲೀಸರು ಹೇಳಿದರು.
‘ಬಂಧಿತರ ಪೈಕಿ ಮೂವರು ಕಾಲೇಜು ವಿದ್ಯಾರ್ಥಿಗಳು. ಇಬ್ಬರು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಂದ ಎರಡು ದ್ವಿಚಕ್ರ ವಾಹನ, ಮೊಬೈಲ್ ಹಾಗೂ ₹ 18,600 ನಗದು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
‘ದಿಲೀಪ್ಕುಮಾರ್ ಹಾಗೂ ರಂಜಿತ್ ಅವರು ಏಪ್ರಿಲ್ 1ರಂದು ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಬೇಗೂರು ರಸ್ತೆಯ ಮುತ್ತುಗದಹಳ್ಳಿಯ ಕಾಲೇಜೊಂದರ ರಸ್ತೆಯಲ್ಲಿ ಬೈಕ್ ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರು. ಹಲ್ಲೆ ಮಾಡಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾಗಿದ್ದರು.’
‘ಸುಲಿಗೆ ಬಗ್ಗೆ ದಿಲೀಪ್ಕುಮಾರ್ ಅವರು ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮತ್ತಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿಯೂ ಇದೆ’ ಎಂದು ಪೊಲೀಸರು ಹೇಳಿದರು.