ಬೆಂಗಳೂರು: ಚರ್ಚ್ಸ್ಟ್ರೀಟ್ನಲ್ಲಿ ಫೆಬ್ರುವರಿವರೆಗೆ ಎಲ್ಲ ವಾರಾಂತ್ಯಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಿ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶಿಸಿದ್ದಾರೆ.
'ವಾಯುಮಾಲಿನ್ಯ ತಡೆಯುವುದು ಮತ್ತು ಸೈಕಲ್ ಸವಾರರು, ಪಾದಚಾರಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ಈ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ'.
'ಇಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿ ಗಾಳಿಯ ಗುಣಮಟ್ಟ ಹೆಚ್ಚಿದರೆ, ಉಳಿದ ಕಡೆಗಳಲ್ಲೂ ಈ ನಿಯಮ ಜಾರಿಗೊಳಿಸಲಾಗುವುದು. ಬ್ಯಾರಿಕೇಡ್ ಅಳವಡಿಸಿ, ಚರ್ಚ್ಸ್ಟ್ರೀಟ್ ನಿವಾಸಿಗಳ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ನಿಯಮ 2020ರ ಫೆಬ್ರುವರಿ ಅಂತ್ಯದವರೆಗೆ ಮಾತ್ರ' ಎಂದು ತಿಳಿಸಿದ್ದಾರೆ.
'ಕ್ಲೀನ್ಏರ್ ಸ್ಟ್ರೀಟ್' ಯೋಜನೆ ಅನುಷ್ಠಾನಗೊಳಿಸಲು ಚರ್ಚ್ ಸ್ಟ್ರೀಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚು. ಪ್ರಾಯೋಗಿಕವಾಗಿ ಈ ರಸ್ತೆಯನ್ನು 'ಫ್ರೀ ಏರ್' ಅಥವಾ 'ಓಪನ್ ಏರ್' ಮಾದರಿಗೆ ಪರಿವರ್ತಿಸಲಾಗುತ್ತಿದೆ. ಅದಕ್ಕಾಗಿ ಇಲ್ಲಿ ವಾರಾಂತ್ಯದಲ್ಲಿ ಮಾತ್ರ ವಾಹನ ಸಂಚಾರ ನಿಷೇಧಿಸಲಾಗಿದೆ. ಜನರ ಸ್ಪಂದನೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ಜಂಟಿ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.