ಬೆಂಗಳೂರು: ಮಳೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಮನೆಯನ್ನು ಕಳೆದುಕೊಂಡವರಿಗೆ ತಕ್ಷಣವೇ ₹1 ಲಕ್ಷ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಮಳೆಯಿಂದ ಪ್ರವಾಹ ಉಂಟಾಗಿರುವ ಯಲಹಂಕ ಹಾಗೂ ಜಕ್ಕೂರು ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಯಲಹಂಕ ಕ್ಷೇತ್ರದಲ್ಲಿ 400 ಮನೆಗಳಿಗೆ ಹಾನಿ ಆಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 600 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.
‘ಎಲ್ಲೆಲ್ಲಿ ಮನೆಗಳಿಗೆ ನೀರು ನುಗ್ಗಿದೆಯೋ ಅವರಿಗೆ ಇಂದೇ ₹10 ಸಾವಿರ ಪರಿಹಾರ ಬಿಡುಗಡೆ ಮಾಡಬೇಕು. ಪೂರ್ಣ ಪ್ರಮಾಣದಲ್ಲಿ ಮನೆಯನ್ನು ಕಳೆದುಕೊಂಡವರಿಗೆ ₹5ಲಕ್ಷ ಪರಿಹಾರ ನೀಡಬೇಕು. ಇದರ ಮೊದಲ ಕಂತಿನ ರೂಪದಲ್ಲಿ ₹1 ಲಕ್ಷವನ್ನು ತಕ್ಷಣವೇ ನೀಡಬೇಕು. ಕಟ್ಟಡಕ್ಕೆ ಭಾಗಶಃ ಹಾನಿ ಆಗಿದ್ದರೆ ₹1 ಲಕ್ಷ ಪರಿಹಾರ ನೀಡಬೇಕು ಎಂದು ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಾನಿಗೊಳಗಾಗಿರುವ ಮೂಲಸೌಕರ್ಯ ದುರಸ್ತಿ ಕುರಿತು ಅಂದಾಜುಪಟ್ಟಿ ತಯಾರಿಸಿ ಸಲ್ಲಿಸಿದರೆ ಅದಕ್ಕೂ ಅನುದಾನ ಬಿಡುಗಡೆ ಮಾಡುತ್ತೇವೆ. ಯಲಹಂಕ ಕ್ಷೇತ್ರದಲ್ಲಿ 10 ಕಿ.ಮೀ ಉದ್ದದಷ್ಟು ಮುಖ್ಯ ರಸ್ತೆ ಹಾಗೂ 20 ಕಿ.ಮೀ ಉದ್ದದಷ್ಟು ಇತರ ರಸ್ತೆಗಳು ಹಾನಿಗೊಳಾಗಿವೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 45 ಕಿ.ಮೀ ಉದ್ದದಷ್ಟು ರಸ್ತೆಗಳಿಗೆ ಹಾನಿ ಆಗಿದೆ. ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.