ಬೆಂಗಳೂರು: ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ‘ಪ್ಯಾರಾ ಸೈಕ್ಲಿಂಗ್’ ಮೂಲಕ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವಿಧಾನಸೌಧದ ಪೂರ್ವದ್ವಾರದ ಬಳಿ ‘ಪ್ಯಾರಾ ಸೈಕ್ಲಿಂಗ್-2020’ (ಸೈಕಲ್ ಯಾತ್ರೆ) ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಆತ್ಮವಿಶ್ವಾಸದಿಂದ ದೇಶದ ಉದ್ದಗಲಕ್ಕೂ ಸಂಚರಿಸಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ಸಂದೇಶವನ್ನು ಈ ಯಾತ್ರೆ ರವಾನಿಸಲಿದೆ ಸೈಕ್ಲಿಂಗ್ ಯಾತ್ರೆ ಯಶಸ್ವಿಯಾಗಲಿ’ ಎಂದು ಹಾರೈಸಿದರು.
ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಹಯೋಗದಲ್ಲಿ ಹೈದರಾಬಾದ್ನ ಆದಿತ್ಯ ಮೆಹ್ತಾ ಫೌಂಡೇಶನ್ ಅಂಗವಿಕಲ ಪ್ರತಿಭೆಗಳನ್ನು ಉತ್ತೇಜಿಸಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದೆ.