ಬೆಂಗಳೂರು: ಆಗಾಗ ಸಣ್ಣ ಬೀಸುತ್ತಿದ್ದ ತಂಗಾಳಿ, ಆಗೊಮ್ಮೆ ಈಗೊಮ್ಮೆ ಸುರಿದ ತುಂತುರು ಮಳೆ, ಹೆಚ್ಚಾದ ಚಳಿ. ನಗರದಲ್ಲಿ ಗುರುವಾರ ಇಡೀ ದಿನ ತಂಪಾದ ವಾತಾವರಣ ಇತ್ತು. ಬೆಳಿಗ್ಗೆ ಎಳೆ ಬಿಸಿಲು ಕೂಡ ಬೀಳಲಿಲ್ಲ. ಸೂರ್ಯನ ಕಿರಣಗಳು ಪ್ರಖರವಾಗಲೇ ಇಲ್ಲ.
ಗುರುವಾರ ನಗರದಲ್ಲಿ ಐದು ಡಿಗ್ರಿ ಸೆಲ್ಸಿಯಸ್ನಷ್ಟು ಕುಸಿದಿತ್ತು. ಸಾಮಾನ್ಯ ದಿನಗಳಲ್ಲಿ 28 ಡಿಗ್ರಿ ಸೆಲ್ಸಿಯಸ್ನಷ್ಟು ಇರುತ್ತಿದ್ದ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿತ್ತು. ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಶುಕ್ರವಾರವೂ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
‘ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಳೆಯಾಗಲಿದ್ದು, ಅದರ ಮುಂದಿನ ಮೂರು ದಿನಗಳಲ್ಲಿ ನಗರದಲ್ಲಿ ಇಬ್ಬನಿ ಬೀಳಲಿದ್ದು, ಇದೇ ವಾತಾವರಣ ಮುಂದುವರಿಯಲಿದೆ’ ಎಂದು ಇಲಾಖೆ ಹೇಳಿದೆ.
ಹೆಚ್ಚು ಬಿಸಿಲು ಬೀಳದ ಕಾರಣ, ಜನರು ಹಾಸಿಗೆಯಿಂದ ಮೇಲೇಳುವುದು ತಡವಾಯಿತು. ವಾಹನ ದಟ್ಟಣೆ, ಜನರ ಓಡಾಟ ಕಡಿಮೆಯಾಗಿ ಬಹುತೇಕ ಲಾಕ್ಡೌನ್ ವಾತಾವರಣ ಕಂಡು ಬಂತು. ಬದಲಾದ ವಾತಾವರಣದಿಂದ ಉದ್ಯಾನ ಮತ್ತು ರಸ್ತೆಗಳಲ್ಲಿ ವಾಯುವಿಹಾರಿಗಳ ಸಂಖ್ಯೆಯೂ ಕಡಿಮೆ ಇತ್ತು.
‘ನಿವಾರ್ ಚಂಡಮಾರುತದ ಪ್ರಭಾವದಿಂದ ನಗರದಲ್ಲಿ ಈ ರೀತಿಯ ವಾತಾವರಣ ಇದೆ. ಎರಡು–ಮೂರು ದಿನ ಇದು ಮುಂದುವರಿಯಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.