ಬೆಂಗಳೂರು: ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಕಮರ್ಷಿಯಲ್ ಠಾಣೆ ವ್ಯಾಪ್ತಿಯ ರೌಡಿ ಮಹಮ್ಮದ್ ಅವೇಜ್ ಅಲಿಯಾಸ್ ಬಚ್ಚನ್ನನ್ನು (24) ಮುಂದಿನ ಒಂದು ವರ್ಷದವರೆಗೆ ಬೆಂಗಳೂರು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
‘ಕೊಲೆ ಯತ್ನ, ಸುಲಿಗೆ, ದರೋಡೆ, ವಾಹನ ಕಳವು, ಜೀವ ಬೆದರಿಕೆ ಸೇರಿದಂತೆ 27 ಪ್ರಕರಣದಲ್ಲಿ ಆರೋಪಿಯಾಗಿದ್ದ ಬಚ್ಚನ್, ಜೈಲಿಗೆ ಹೋಗಿ ಬಂದಿದ್ದ. ಪುನಃ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಜನರಲ್ಲಿ ಭಯವನ್ನುಂಟು ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ರೌಡಿಯನ್ನು ಗಡಿಪಾರು ಮಾಡುವಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್ಸ್ಪೆಕ್ಟರ್, ಎಸಿಪಿ ಮೂಲಕ ಡಿಸಿಪಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯೂ ಆಗಿರುವ ಉತ್ತರ ವಿಭಾಗದ ಡಿಸಿಪಿ ಎಸ್.ಡಿ. ಶರಣಪ್ಪ, ರೌಡಿಯ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ’ ಎಂದೂ ತಿಳಿಸಿದರು.