ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಮೆಟ್ರೊಪಾಲಿಟನ್‌ ಆಡಳಿತ ಮರೀಚಿಕೆ: ಹೊಸ ಶಾಸನಕ್ಕೆ ತಜ್ಞರ ಒತ್ತಾಯ

ಜಿಬಿಎಂಎ ಅಗತ್ಯಗಳನ್ನು ಪೂರೈಸುವಲ್ಲಿ 2020ರ ಬಿಬಿಎಂಪಿ ಕಾಯ್ದೆ ವಿಫಲ
Last Updated 29 ಆಗಸ್ಟ್ 2021, 22:01 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನಲ್ಲಿ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದಾದ ಬೆಂಗಳೂರು ಮಹಾನಗರದ(ಮೆಟ್ರೊಪಾಲಿಟನ್‌) ಆಡಳಿತಕ್ಕೆ ಪ್ರತ್ಯೇಕ ಹಾಗೂ ಸಮಗ್ರ ಶಾಸನ ಬೇಕು ಎಂಬುದು ದಶಕಗಳ ಬೇಡಿಕೆ. ಈ ಉದ್ದೇಶದಿಂದಲೇ 2020ರಲ್ಲಿ ಬಿಬಿಎಂಪಿ ಕಾಯ್ದೆಯನ್ನು ರೂಪಿಸಲಾಗಿದ್ದು, ಅದರ ಜಾರಿಗಾಗಿಯೇ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲಾಯಿತು. ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದೆಯೇ ಬಿಬಿಎಂಪಿ ಆಡಳಿತ ಒಂದು ವರ್ಷ ಪೂರೈಸುವ ಹೊಸ್ತಿಲಲ್ಲಿದೆ. ಈಗಲೂ ಈ ಮಹಾನಗರದ (ಮೆಟ್ರೋಪಾಲಿಟನ್‌) ಆಡಳಿತಕ್ಕೆ ‌‌‌ಸಮಗ್ರ ಶಾಸನ ಕನಸಾಗಿಯೇ ಉಳಿದಿದೆ.

ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆ 1992ರ ಧ್ಯೇಯೋದ್ದೇಶಗಳನ್ನು ಅಳವಡಿಸಲು2020ರ ಬಿಬಿಎಂಪಿ ಕಾಯ್ದೆ ವಿಫಲವಾಗಿದೆ. ಮಹಾನಗರ ಯೋಜನಾ ಸಮಿತಿಯ (ಎಂಪಿಸಿ) ರಚನೆ ಮತ್ತು ಸಂರಚನೆ, ಮೆಟ್ರೋಪಾಲಿಟನ್‌ ಪ್ರದೇಶದ ವ್ಯಾಖ್ಯಾನ ಮತ್ತು ಈ ಪ್ರದೇಶಕ್ಕೆ ಕರಡು ಅಭಿವೃದ್ಧಿ ಯೋಜನೆ ಸಿದ್ಧಪಡಿಸುವ ವಿಧಿವಿಧಾನಗಳನ್ನು ನಿರೂಪಿಸಲು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 367 ರಲ್ಲಿ ಗೊತ್ತುಪಡಿಸಿರುವ ನಿಬಂಧನೆಗಳು ಮಹಾನಗರ ಪ್ರದೇಶದ ಸಮರ್ಪಕ ಆಡಳಿತಕ್ಕೆ ಏನೇನೂ ಸಾಲುವುದಿಲ್ಲ. ಏಕೆಂದರೆ, ಸಂವಿಧಾನದ ಅನುಚ್ಛೇದ 243-ಪಿ (ಸಿ) ಮತ್ತು 243 ಜೆಡ್‌ಇಯಲ್ಲಿ ಹೇಳಲಾದ ಖಂಡಗಳನ್ನು ಸುಧಾರಣೆಯಿಲ್ಲದೆಯೇ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 367ರಲ್ಲಿ ಯಥಾವತ್ತಾಗಿ ಬಳಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ನಗರಾಡಳಿತ ತಜ್ಞರು.

ಸಮಗ್ರ ಮೆಟ್ರೋಪಾಲಿಟನ್‌ ಶಾಸನವೇ ಏಕೆ?: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಪ್ರದೇಶಗಳನ್ನು ಬೆಂಗಳೂರು ಮಹಾನಗರ ಪ್ರದೇಶವೆಂದು (ಬಿಎಂಆರ್) 1985ರ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯಲ್ಲಿ ಗುರುತಿಸಲಾಗಿದೆ. ಈ ಸರಹದ್ದಿನ ವ್ಯವಸ್ಥಿತ ಮತ್ತು ಯೋಜಿತ ಅಭಿವೃದ್ಧಿಗಾಗಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರವು (ಬಿಎಂಆರ್‌ಡಿಎ) ರಚಿತವಾಗಿದೆ. ಈ ಸಂಸ್ಥೆಯನ್ನು ಸಶಕ್ತಗೊಳಿಸಲು ಮೆಟ್ರೊಪಾಲಿಟನ್‌ ಆಡಳಿತದ ವಿಧಿವಿಧಾನಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡ ಸಮಗ್ರ ಶಾಸನ ಅವಶ್ಯ ಎನ್ನುವುದು ತಜ್ಞರ ಪ್ರತಿಪಾದನೆ.

‘1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸೆಕ್ಷನ್‌ 503–ಬಿ ಯನ್ನು ಅಳವಡಿಸಲಾಗಿತ್ತು. ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 367ರಲ್ಲಿ ಇದನ್ನು ಯಥಾವತ್ತಾಗಿ ಸೇರಿಸಲಾಗಿದೆ. ಇದು ಸಾಲದು. ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕಾಗಿ ಜನಸ್ನೇಹಿ ಆಡಳಿತ ನಿರ್ವಹಿಸಬಲ್ಲ ಸಮಗ್ರ ಶಾಸನ ವ್ಯವಸ್ಥೆ ಹೊಂದುವುದೇ ಸಮಯೋಚಿತ ಮತ್ತು ಸುಧಾರಿತ ಕ್ರಮ’ ಎನ್ನುತ್ತಾರೆ ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ನ ನಿರ್ದೇಶಕ ಪಿ.ಜಿ.ಶೆಣೈ.

‘ಬಿಎಂಆರ್‌ ವ್ಯಾಪ್ತಿಯಲ್ಲಿ ಬಿಡಿಎ, ಬಿಬಿಎಂಪಿ, ಜಲಮಂಡಳಿ, ಬಿಎಂಟಿಸಿ, ಬಿಎಂಆರ್‌ಸಿಎಲ್‌ ಮುಂತಾದ ಸರ್ಕಾರಿ ಸಂಸ್ಥೆಗಳಿವೆ. ಒಂದು ಸಂಯೋಜಿತ ಪ್ರಾದೇಶಿಕ ಅಭಿವೃದ್ಧಿ ಯೋಜನೆಗಳ ಸಿದ್ಧಪಡಿಸುವಿಕೆ ಮತ್ತು ನಿರ್ವಹಣೆಗಾಗಿ ಇಡೀ ಬಿಎಂಆರ್‌ ವ್ಯಾಪ್ತಿಯನ್ನು ‘ಬೃಹತ್‌ ಬೆಂಗಳೂರು ಮಹಾನಗರ ಪ್ರದೇಶ’ವೆಂದು (ಜಿಬಿಎಂಎ) ಗುರುತಿಸಿ, ಇದರ ಆಡಳಿತಕ್ಕಾಗಿ ಬೃಹತ್‌ ಬೆಂಗಳೂರು ಮಹಾನಗರ ಯೋಜನಾ ಸಮಿತಿಯನ್ನು (ಜಿಬಿಎಂಪಿಸಿ) ರಚಿಸಿ, ಅದರ ಮೂಲಕ ಸಮನ್ವಯ ಮತ್ತು ಮೇಲ್ವಿಚಾರಣೆ ನಡೆಸುವುದು ಅತ್ಯವಶ್ಯಕ. ಇಂತಹ ವ್ಯವಸ್ಥೆಯಿಲ್ಲದೇ ಜಿಬಿಎಂಎ ವ್ಯಾಪ್ತಿಯ ವಿವಿಧ ಸಂಸ್ಥೆಗಳ ನಡುವೆ ಸಮನ್ವಯ ಕೊರತೆಯುಂಟಾಗಿ ಭೌತಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಂಕೀರ್ಣತೆಗಳು ತಲೆದೋರುತ್ತಿವೆ. ಪೌರಾಡಳಿತಕ್ಕೆ ಸೀಮಿತವಾದ ಬಿಬಿಎಂಪಿ ಕಾಯ್ದೆಯು ಜಿಬಿಎಂಎ ಬೇಡಿಕೆಗಳನ್ನು ಪೂರೈಸದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮಹಾನಗರ ಪ್ರದೇಶಗಳ ಆಡಳಿತದ ವಿಕಸನ: ‘ದೇಶದ ಬಹುತೇಕ ನಗರ ಪಾಲಿಕೆಗಳ ಸುತ್ತಲಿನ ನಗರ ಕೇಂದ್ರಿತ ಬೆಳವಣಿಗೆಯು ಬಹುತೇಕವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯೊಳಗೆ ವಿಸ್ತರಣೆಯಾಗುತ್ತಿದೆ. ಇಂತಹ ವಿಸ್ತೃತ ನಗರ ಕೇಂದ್ರಗಳಿಗೆ ನಗರ ಸೇವೆಗಳನ್ನು ಒದಗಿಸಲು ನಗರ ಪಾಲಿಕೆಗಳಗೆ ಸದ್ಯದ ಪರಿಸ್ಥಿತಿಯಲ್ಲಿ ಹೊರೆಯಾಗುತ್ತಿದ್ದು, ತಮ್ಮ ಅಧಿಕಾರದ ವ್ಯಾಪ್ತಿ ಮೀರಿದ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು ಪಾಲಿಕೆಗಳಿಗೆ ಅನಿವಾರ್ಯವಾಗುತ್ತಿದೆ. ಸರಿಯಾದ ಮೆಟ್ರೊಪಾಲಿಟನ್‌ ಆಡಳಿತದ ಚೌಕಟ್ಟಿಲ್ಲದ ಕಾರಣ ನಗರದ ಬೆಳವಣಿಗೆ ಅಸ್ತವ್ಯಸ್ತವಾಗಿದೆ ಮತ್ತು ಅನಿಯಮಿತವಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕ ಸೇವೆಗಳು ಮತ್ತು ಮೂಲಸೌಕರ್ಯಗಳ ಕುರಿತ ಅನೇಕ ಸಂಕೀರ್ಣ ನಿರ್ವಹಣಾ ಸಮಸ್ಯೆಗಳು ಉದ್ಭವಿಸುತ್ತಿವೆ’ ಎಂದು ವಿಶ್ಲೇಷಿಸುತ್ತಾರೆ ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ನ ನಿರ್ದೇಶಕ ಸಿ.ಆರ್‌.ರವೀಂದ್ರ.‌

‘ದೇಶದಲ್ಲಿ ಬಿಎಂಆರ್‌ಡಿಎ ಸೇರಿದಂತೆ ಕೋಲ್ಕತ್ತಾ, ಚೆನ್ನೈ, ಮುಂಬೈ, ದೆಹಲಿ ರಾಜಧಾನಿ ಪ್ರದೇಶ, ಗುವಾಹಟಿ, ಆಂಧ್ರಪ್ರದೇಶ ರಾಜಧಾನಿ ಪ್ರದೇಶದ ಮಹಾನಗರ ಅಭಿವೃದ್ಧಿ ಪ್ರಾಧಿಕಾರಗಳಿಗೆ ಅನ್ವಯವಾಗುವ ಕಾನೂನುಗಳಲ್ಲಿ ಸಂವಿಧಾನದ ಅನುಚ್ಛೇದ 243-ಜೆಡ್‌ಇ ಎಂಪಿಸಿಯ ಬಗ್ಗೆ ಉಲ್ಲೇಖವಿಲ್ಲ. 2008ರ ಹೈದರಾಬಾದ್ ಮೆಟ್ರೋಪಾಲಿಟನ್‌ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯಡಿಯಲ್ಲಿ ಪ್ರಾಧಿಕಾರವು ಕಳುಹಿಸುವ ಕರಡು ಮೆಟ್ರೋಪಾಲಿಟನ್‌ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸುವ ಪೂರ್ವದಲ್ಲಿ ತೆಲಂಗಾಣ ಸರ್ಕಾರವು ಎಂಪಿಸಿಯೊಡನೆ ಸಮಾಲೋಚಿಸಿಯೇ ಮಂಜೂರಾತಿಯ ನೀಡಬೇಕೆಂದು ಹೇಳಿದೆ. ಪ್ರಸ್ತಾಪಿತ ನವ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ, ಜಿಬಿಎಂಪಿಸಿಯು ಸಿದ್ದಪಡಿಸುವ ಕರಡು ಅಭಿವೃದ್ಧಿ ಯೋಜನೆಯು ಅದರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಬಿಎಂಆರ್‌ಎ ಮೂಲಕ ನಿರೂಪಿಸಲು ಸಾಂಸ್ಥಿಕ ಮತ್ತು ವ್ಯಾವಹಾರಿಕ ಚೌಕಟ್ಟನ್ನು ಒಳಗೊಂಡಿದೆ. ಇಂತಹ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವ ಪದ್ದತಿಯನ್ನು ಕರ್ನಾಟಕ ಸರ್ಕಾರವು ಪ್ರಪ್ರಥಮ ಬಾರಿಗೆ ಜಾರಿಗೆ ತರಲು ಇದು ಸುಸಂದರ್ಭ’ ಎಂದು ರವೀಂದ್ರ ವಿವರಿಸಿದರು.

ಬೆಂಗಳೂರಿನಲ್ಲಿ ಮೆಟ್ರೊಪಾಲಿಟನ್‌ ಆಡಳಿತ: ‘ಕೆಎಂಸಿ ಕಾಯ್ದೆಯ ಸೆಕ್ಷನ್‌ 503–ಬಿ ಜಾರಿಯಾದ ಬಳಿಕ 2014ರ ಜನವರಿಯಲ್ಲಿ ಪ್ರಥಮ ಬಾರಿಗೆ ಬೆಂಗಳೂರು ಎಂಪಿಸಿಯನ್ನು ರಚಿಸಲಾಯಿತಾದರೂ ಬಿಎಂಪಿಸಿಯ ಕಾರ್ಯಾಚಾರಣೆಗೆ ಸರ್ಕಾರವು ಉತ್ಸಾಹವನ್ನೇ ತೋರಿಸಲಿಲ್ಲ. 2014ರ ಸೆಪ್ಟೆಂಬರ್‌ನಿಂದ 2016ರ ಫೆಬ್ರುವರಿ ಅಸ್ತಿತ್ವದಲ್ಲಿದ್ದ ಸಮಿತಿ ಸಭೆ ನಡೆಸದೆಯೇ ವಿಸರ್ಜನೆಗೊಂಡಿತು. ಸುದೀರ್ಘ ಕಾನೂನು ಹೋರಾಟದ ಬಳಿಕ 30 ಸದಸ್ಯರನ್ನು ಒಳಗೊಂಡ ಎರಡನೇ ಬಿಎಂಪಿಸಿ (ಇತ್ತೀಚಿನದು) 2018ರ ಜೂನ್‌ 8ರಂದು ರಚನೆಯಾಯಿತು. ಇದೂ ಸಹ ಅನೇಕ ಸಲ ಅನೌಪಚಾರಿಕವಾಗಿ ಸಭೆ ಸೇರಿತ್ತಾದರೂ ಐದಾರು ನಿಮಿಷಗಳಲ್ಲೇ ಅವು ಸಂಪನ್ನಗೊಂಡಿದ್ದವು’ ಎಂದರು.

ಜಿಬಿಎಂಪಿಸಿ ಸಂರಚನೆಗೆ ಸಲಹೆಗಳು

* ಮುಖ್ಯಮಂತ್ರಿ ಅವರೇ ‘ಜಿಬಿಎಂಪಿಸಿಯ ಅಧ್ಯಕ್ಷರೆಂದು ಕಾಯ್ದೆಯಲ್ಲೇ ನಿರ್ದಿಷ್ಟಪಡಿಸಬೇಕು.

* ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು - ಜಿಬಿಎಂಪಿಸಿಯ ಕಾರ್ಯದರ್ಶಿಯಾಗಿ ನೇಮಿಸಬೇಕು.

* ಜಿಬಿಎಂಪಿಸಿಯು ಮೂರು ಅಥವಾ ನಾಲ್ಕು ಕಾರ್ಯಕ್ಷೇತ್ರೀಯ (ಸೆಕ್ಟೋರಲ್) ಸಮಿತಿಗಳನ್ನು ಹೊಂದಬಹುದು. ಇವುಗಳ ಕಾರ್ಯಗಳನ್ನು ಮತ್ತು ವ್ಯವಹರಿಸಬೇಕಾದ ವಿಷಯಗಳನ್ನು ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಬೇಕು.

* 1985ರ ಬಿಎಂಆರ್‌ಡಿಎ ಕಾಯ್ದೆಯನ್ನು ಮರುರೂಪಿಸಿ ‘ಬಿಎಂಆರ್‌ಡಿಎಯನ್ನು ಬೃಹತ್‌ ಬೆಂಗಳೂರು ಪ್ರಾದೇಶಿಕ ಪ್ರಾಧಿಕಾರ ‘ಬಿಎಂಆರ್‌ಎ ಎಂದು ಪರಿವರ್ತಿಸಬೇಕು. ಇದನ್ನು ಜಿಬಿಎಂಪಿಸಿಯ ತಾಂತ್ರಿಕ ಸಚಿವಾಲಯವನ್ನಾಗಿ ನೇಮಿಸಬೇಕು. ನಗರ ಯೋಜನೆ, ಸಂಚಾರ ಮತ್ತು ಸಾರಿಗೆ, ಪರಿಸರ ರಕ್ಷಣೆ ಮತ್ತು ಸಾಂಸ್ಥಿಕ ಹಣಕಾಸು ಕ್ಷೇತ್ರಗಳ ಪರಿಣಿತರನ್ನು ಸದಸ್ಯರನ್ನಾಗಿ ನೇಮಿಸಿ ಬಿಎಂಆರ್‌ಎಯನ್ನು ಬಲಪಡಿಸಬೇಕು.

‘ಜಿಬಿಎಂಪಿಸಿ’ಯ ಅಧಿಕಾರ ಮತ್ತು ಕಾರ್ಯಗಳು

* ಮಹಾನಗರ ವ್ಯಾಪ್ತಿ ಪ್ರದೇಶಕ್ಕೆ 5-ವರ್ಷದ ಕರಡು ಅಭಿವೃದ್ಧಿ ಯೋಜನೆ ಸಿದ್ದಪಡಿಸುವುದು.

* ಈ ಯೋಜನೆಯಲ್ಲಿ ಜಿಬಿಎಂಎ ವ್ಯಾಪ್ತಿ ಪ್ರದೇಶದ ಗ್ರಾಮೀಣ ಮತ್ತು ನಗರ ಭಾಗಗಳ ಭೂ ಉಪಯೋಗ ಯೋಜನೆ, ಅಭಿವೃದ್ಧಿ ಗುರಿಗಳು, ಧ್ಯೇಯೋದ್ದೇಶಗಳು, ನೀತಿಗಳು ಮತ್ತು ಆದ್ಯತೆಗಳನ್ನು ನಿರೂಪಿಸುವುದು

* ಕರಡು ಅಭಿವೃದ್ಧಿ ಯೋಜನೆಯ ಅನುಷ್ಠಾನ ನಿಯಂತ್ರಣ ಮತ್ತು ಉಸ್ತುವಾರಿಯನ್ನು ಜಿಬಿಎಂಪಿಸಿಯ ಮಾರ್ಗದರ್ಶನದಲ್ಲಿ ನಡೆಸುವುದು ಶಾಸನಾತ್ಮಕ ಚಟುವಟಿಕೆ. ಜಿಬಿಎಂಎ ವ್ಯಾಪ್ತಿಯ ಬಿಬಿಎಂಪಿ, ಇತರ ಪೌರ ಸಭೆಗಳು ಮತ್ತು ಗ್ರಾಮ ಪಂಚಾಯತಿಗಳ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಸ್ಥಳ ವಿಸ್ತಾರದ ಅಭಿವೃದ್ಧಿಯಂತಹ ಅಂಶಗಳ ಪ್ರಸ್ತುತತೆಯನ್ನು ಜಿಬಿಎಂಪಿಸಿಯು ಕಾಯ್ದುಕೊಳ್ಳಬೇಕು.

* 5 ವರ್ಷಗಳ ಕರಡು ಅಭಿವೃದ್ಧಿ ಯೋಜನೆಯನ್ನು 20 ವರ್ಷಗಳ ‘ದೃಷ್ಟಿಕೋನ ಯೋಜನೆ’ಗೆ ಜೋಡಿಸಿಕೊಳ್ಳಬೇಕು. ಇದು ಇಡೀ ಜಿಬಿಎಂಎ ಪ್ರದೇಶದ ಅಭಿವೃದ್ಧಿ, ಪ್ರಾದೇಶಿಕ ಅಸಮತೋಲನ ನಿವಾರಣೆ, ಹಂತ ಹಂತವಾದ ಹೂಡಿಕೆ ಯೋಜನೆಯಂತಹ ಅಂಶಗಳನ್ನು ಒಳಗೊಂಡಿರಬೇಕು.

* ಬಿಬಿಎಂಪಿ, ಬಿಡಿಎ, ಬೆಂಗಳೂರು ಜಲಮಂಡಳಿ, ನಮ್ಮ ಮೆಟ್ರೊ, ಬಿಎಂಟಿಸಿ, ಇತ್ಯಾದಿ ಜಿಬಿಎಂಪಿಸಿಯ ಅಂಗ ಸಂಸ್ಥೆಗಳು ತಮ್ಮ ವಾರ್ಷಿಕ ಕಾರ್ಯಕಾರಿ ಯೋಜನೆ/ಅಭಿವೃದ್ಧಿ ಯೋಜನೆಗಳನ್ನು 5 ವರ್ಷದ ಕರಡು ಯೋಜನೆಯನ್ನು ಸರ್ಕಾರೇತರ ಸಂಸ್ಥೆಗಳು ಮತ್ತು ವೃತ್ತಿಪರ ತಾಂತ್ರಿಕ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಪ್ರತಿ ವರ್ಷವೂ ಪರಿಷ್ಕರಿಸಬೇಕು.

‘ಬಿಎಂಆರ್‌ಎ ಮೇಲೆ ಜಿಬಿಎಂಪಿಸಿ ಉಸ್ತುವಾರಿ
ಜಿಬಿಎಂಪಿಸಿಯು ಬಿಎಂಆರ್‌ಎ ಕಾರ್ಯನಿರ್ವಹಣೆಯ ಪ್ರಮುಖ ನಿಯಂತ್ರಣ ಪ್ರಾಧಿಕಾರವಾಗಿರುತ್ತದೆ. ಬಿಡಿಎ ಸೇರಿದಂತೆ ಎಲ್ಲ ಸ್ಥಳೀಯ ಯೋಜನಾ ಪ್ರದೇಶಗಳ ಯೋಜನಾ ಪ್ರಾಧಿಕಾರಗಳು ಸಿದ್ದಪಡಿಸಿದ ಮಾಸ್ಟರ್‌ ಪ್ಲಾನ್‌ಗಳ ಅನುಮೋದನೆಗಾಗಿ ರಾಜ್ಯ ಸರ್ಕಾರದ ಅಧಿಕಾರವನ್ನು ಜಿಬಿಎಂಪಿಸಿಯು ಚಲಾಯಿಸುತ್ತದೆ.

ಬಿಎಂಆರ್‌ಎ ಸಲ್ಲಿಸುವ ಕರಡು ಅಭಿವೃದ್ಧಿ ಯೋಜನೆಗೆ ಜಿಬಿಎಂಪಿಸಿ 3 ತಿಂಗಳ ಅವಧಿಯಲ್ಲಿ ಅನುಮೋದನೆ ನೀಡಬೇಕಾಗುತ್ತದೆ. ಕರಡು ಅಭಿವೃದ್ಧಿ ಯೋಜನೆಯನ್ನು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ‘ಜಿಬಿಎಂಪಿಸಿ’ ಅಧ್ಯಕ್ಷರು ’ಜಿಬಿಎಂಪಿಸಿ ಕಾರ್ಯದರ್ಶಿಗೆ ಸೂಚನೆಯನ್ನು ನೀಡಬೇಕು.

ಜಿಬಿಎಂಪಿಸಿಯ ವ್ಯಾಪ್ತಿ–ಗಾತ್ರ

* 2011ರ ಜನಗಣತಿಯನ್ವಯ 1.17 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ 8005 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿ ಪ್ರದೇಶವನ್ನು (ಜಿಬಿಎಂಎ) ಜಿಬಿಎಂಪಿಸಿ ವ್ಯಾಪ್ತಿ ಪ್ರದೇಶವೆಂದು ಉಲ್ಲೇಖಿಸಿ ಕಾಯ್ದೆಯಲ್ಲೇ ನಿರ್ದಿಷ್ಟಪಡಿಸಬೇಕು.

* ಜಿಬಿಎಂಪಿಸಿ ಯ ಗಾತ್ರವನ್ನು ಗರಿಷ್ಠ 45 ಸದಸ್ಯರಿಗೆ ನಿಗದಿಪಡಿಸಬೇಕು. ಅದರ ಮೂರನೇ ಎರಡರಷ್ಟು (30 ಮಂದಿ) ಚುನಾಯಿತ ಸದಸ್ಯರಿರುತ್ತಾರೆ. ಮೇಯರ್‌, ಸ್ಥಾಯಿ ಸಮಿತಿ/ವಲಯ ಸಮಿತಿಗಳ ಅಧ್ಯಕ್ಷರು ಮತ್ತು ಪೌರಸಭೆಗಳ ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುವ ಮೂಲಕ ಈ ಸ್ಥಾನಗಳನ್ನು ತುಂಬಬಹುದು.

* ಮೂರನೇ ಒಂದರಷ್ಟು ಖಾಲಿ ಸ್ಥಾನಗಳನ್ನು, (15 ಸದಸ್ಯರು) ‘ಜಿಬಿಎಂಎ ವ್ಯಾಪ್ತಿಯ ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರನ್ನು ನಾಮ ನಿರ್ದೇಶನಗೊಳಿಸಬಹುದು.

* ಜಿಬಿಎಂಪಿಸಿಯು ಬಿಬಿಎಂಪಿಯ ಮುಖ್ಯ ಆಯುಕ್ತರು, ಬಿಡಿಎ ಆಯುಕ್ತರು, ಜಲಮಂಡಳಿಯ ಅಧ್ಯಕ್ಷರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಡಿಎ ಆಯುಕ್ತರು, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ವೃತ್ತಿಪರ ಮತ್ತು ತಾಂತ್ರಿಕ ಸಂಸ್ಥೆಗಳು ಮತ್ತಿತರ ಏಜೆನ್ಸಿಗಳ ಮುಖ್ಯ ಕಾರ್ಯನಿರ್ವಾಹಕ ಪ್ರತಿನಿಧಿಗಳನ್ನು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರತಿನಿಧಿಗಳನ್ನು ಹೊಂದಿರುತ್ತದೆ.

**
ಜಿಬಿಎಂಎಯ ಅಭಿವೃದ್ಧಿ ಯೋಜನೆಗಳ ನಿರ್ವಹಣೆ ಮತ್ತು ಆಡಳಿತಕ್ಕಾಗಿ ನೂತನವಾದ ಸಮಗ್ರ ಕಾನೂನು ಅವಶ್ಯಕ. ಬಿಬಿಎಂಪಿ ಕಾಯ್ದೆಗೆ ಅಲ್ಲಿಲ್ಲೊಂದು ತಿದ್ದುಪಡಿ ತಂದರೆ ದಕ್ಷ ಮೆಟ್ರೋಪಾಲಿಟನ್‌ ಆಡಳಿತದ ಧ್ಯೇಯೋದ್ದೇಶ ಈಡೇರದು
-ಪಿ. ಜಿ. ಶೆಣೈ, ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ನ ನಿರ್ದೇಶಕ

*
ಯಾವ ರಾಜ್ವೂ ಇದುವರೆಗೆ ಮೆಟ್ರೋಪಾಲಿಟನ್‌ ಆಡಳಿತಕ್ಕಾಗಿ ಸಮಗ್ರ ಶಾಸನವನ್ನು ಹೊಂದಿಲ್ಲ. ನವ ಬೆಂಗಳೂರು ಆಡಳಿತಕ್ಕೆ ಶಾಸನಾತ್ಮಕ ಚೌಕಟ್ಟು ರೂಪಿಸಿದರೆ ದೇಶಕ್ಕೇ ಜನಸ್ನೇಹಿ ಮೆಟ್ರೋಪಾಲಿಟನ್ ಆಡಳಿತಕ್ಕೆ ಮೇಲ್ಪಂಕ್ತಿ ಹಾಕಿದಂತಾಗಲಿದೆ.
-ಸಿ.ಆರ್‌.ರವೀಂದ್ರ, ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ನ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT