ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ಆರೋಪಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಿ.ಪಿ.ಯೋಗೇಶ್ವರ್ ಅವರ ಭಾವಚಿತ್ರ ಅಂಟಿಸಿದ್ದ ಬಕೆಟ್ ಹಿಡಿದುಕೊಂಡು ಅವರ ಮುಖವಾಡ ಧರಿಸಿದ್ದ ಸದಸ್ಯರೊಬ್ಬರು, ‘ಸಮಯ ಸಾಧಕ ಯೋಗೇಶ್ವರ’ ಎಂದು ಘೋಷಣೆ ಕೂಗಿದರು.
‘ಮೆಗಾಸಿಟಿ ಹಗರಣದ ರೂವಾರಿ ಆಗಿರುವ ಯೋಗೇಶ್ವರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಿರುವ ಬಿಜೆಪಿ, ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಭ್ರಷ್ಟರನ್ನೇ ಸೆಳೆಯುವ ತಂತ್ರದಲ್ಲಿ ಬಿಜೆಪಿ ನಾಯಕರು ನಿರತರಾಗಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.