ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂದೆ ನಿಂತು ಕೆಲಸ ಮಾಡುತ್ತಿರುವ ಬಿಬಿಎಂಪಿ ಶಾಲಾ–ಕಾಲೇಜಿನ ಹೊರಗುತ್ತಿಗೆ ಶಿಕ್ಷಕರು ಮತ್ತು ಉಪನ್ಯಾಸಕರು ಕೋವಿಡ್ ಯೋಧರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಹೀಗಾಗಿ, ಕೋವಿಡ್ ಕರ್ತವ್ಯದಿಂದ ಮುಕ್ತಿ ಕೋರಿ ಪಾಲಿಕೆ ಆಯುಕ್ತರಿಗೆ ಉಪನ್ಯಾಸಕರು ಪತ್ರ ಬರೆದಿದ್ದಾರೆ.
ಬಿಬಿಎಂಪಿಯ 91 ನರ್ಸರಿ, 16 ಪ್ರಾಥಮಿಕ ಶಾಲೆ, 33 ಪ್ರೌಢಶಾಲೆ, 15 ಪದವಿ ಪೂರ್ವ ಕಾಲೇಜು, 6 ಪ್ರಥಮ ದರ್ಜೆ ಕಾಲೇಜುಗಳಲ್ಲಿ 600ಕ್ಕೂ ಹೆಚ್ಚು ಹೊರ ಗುತ್ತಿಗೆ ಶಿಕ್ಷಕರು ಮತ್ತು ಉಪನ್ಯಾಸಕರು ಇದ್ದಾರೆ.
ಕೆಲಸ ನಿರ್ವಹಣೆ ಸಂದರ್ಭದಲ್ಲಿ 40 ಜನರಿಗೆ ಸೋಂಕು ತಗುಲಿದೆ. ಕೋವಿಡ್ ಯೋಧರೆಂದು ನಿರ್ಧರಿಸದ ಕಾರಣ ಯಾವುದೇ ಸವಲತ್ತು ದೊರೆಯುತ್ತಿಲ್ಲ. ಹಾಸಿಗೆ ಮತ್ತು ಆಮ್ಲಜನಕ ಸಿಗದೆ ಪರದಾಡಬೇಕಾದ ಸ್ಥಿತಿ ಇದೆ ಎಂದು ಉಪನ್ಯಾಸಕರು ದೂರಿದ್ದಾರೆ.
‘ನಮ್ಮಿಂದ ಮನೆಯವರಿಗೂ ಕೋವಿಡ್ ಹರಡುತ್ತಿದೆ. ನಾಲ್ಕು ಶಿಕ್ಷಕರು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ, ಕೋವಿಡ್ ಯೋಧರ ಪಟ್ಟಿಯಲ್ಲಿ ಇಲ್ಲದ ಕಾರಣ ಕೇಂದ್ರ ಸರ್ಕಾರದ ಯಾವುದೇ ಪರಿಹಾರ ದೊರಕುತ್ತಿಲ್ಲ’ ಎಂದು ಹೇಳಿದ್ದಾರೆ.
‘ಕೋವಿಡ್ ಯೋಧರ ಪಟ್ಟಿಗೆ ಸೇರಿಸಿ, ಇಲ್ಲವೇ ಕೋವಿಡ್ ಕರ್ತವ್ಯದಿಂದ ಮುಕ್ತಿಗೊಳಿಸಿ’ ಎಂದು ಅವರು ಪತ್ರದಲ್ಲಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ನಡುವೆ, ಮಾರ್ಚ್ನಿಂದ ಈಚೆಗೆ ಬಾಕಿ ವೇತನವನ್ನೂ ಬಿಡುಗಡೆ ಮಾಡಿಲ್ಲ. 2020ರ ಜೂನ್ ಮತ್ತು ಜುಲೈನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರೂ ವೇತನ ಬಿಡುಗಡೆ ಮಾಡಿಲ್ಲ. ಕೂಡಲೇ ವೇತನ ಕೊಡಿಸಬೇಕು ಎಂದು ಕೋರಿದ್ದಾರೆ.