ಬೆಂಗಳೂರು: ಕೋವಿಡ್ನಿಂದ ಸಂಕಷ್ಟಕ್ಕೆ ತುತ್ತಾಗಿರುವ ವೃತ್ತಿ ರಂಗಭೂಮಿ ಕಲಾವಿದರು, ಸಹಕಲಾವಿದರು ಮತ್ತು ಸಿನಿಮಾ ಸಹ ಕಲಾವಿದರಿಗೆ ತಲಾ ₹5 ಸಾವಿರದಂತೆ ಒಂದು ಬಾರಿಯ ಆರ್ಥಿಕ ನೆರವು ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಹೊಟೇಲ್ ಉದ್ಯಮ ನೆಲಕಚ್ಚಿದ್ದು, ಇದರ ಪುನಶ್ಚೇತನಕ್ಕೆ ಕ್ರಮ ತೆಗೆದುಕೊಳ್ಳಬೇಕು. ಮಾರ್ಚ್ 20 ರಿಂದ ಅನ್ವಯವಾಗುವಂತೆ ಕನಿಷ್ಠ 1 ವರ್ಷದವರೆಗೆ ಜಿಎಸ್ಟಿ ಹಾಗೂ ಇತರ ತೆರಿಗೆ ರಜೆ ನೀಡಬೇಕು ಬ್ಯಾಂಕ್ ಸಾಲ ಮರುಪಾವತಿಯನ್ನು ಮುಂದೂಡಬೇಕು. ಬಡ್ಡಿ ದರದಲ್ಲಿ ಮೂರನೇ ಒಂದರಷ್ಟು ಕಡಿತಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ವಿಧಿಸಲಾಗುತ್ತಿರುವ ವಿದ್ಯುತ್ ಡಿಮ್ಯಾಂಡ್ ಶುಲ್ಕವನ್ನು ಒಂದು ವರ್ಷ ಕಡಿತಗೊಳಿಸಬೇಕು. ಪ್ರವಾಸಿ ಗೈಡ್ಗಳು, ಕೆಲಸಗಾರರು ಮತ್ತು ಅರೆ ವೇತನ ಸಿಬ್ಬಂದಿಗೆ ಒಂದು ಬಾರಿಯ ಆರ್ಥಿಕ ನೆರವು ನೀಡಬೇಕು ಎಂದಿದ್ದಾರೆ.
ಜಿಮ್, ಫಿಟ್ನೆಸ್ ಕೇಂದ್ರಗಳ ತರಬೇತುದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಒಂದು ಬಾರಿಯ ಆರ್ಥಿಕ ನೆರವು ನೀಡಬೇಕು. ಜಿಮ್ ಮತ್ತು ಫಿಟ್ನೆಸ್ ಕೇಂದ್ರಗಳ ಜಿಎಸ್ಟಿ ತೆರಿಗೆ ಕೈಬಿಡಬೇಕು, ಸಾಲ ವಸೂಲಿ ಅವಧಿ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.