ಬೆಂಗಳೂರು: ನಗರದಲ್ಲಿ ಮಳೆಯಿಂದ ಆಗಿರುವ ಅನಾಹುತಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನುದ್ದೇಶಿಸಿ ಟ್ವೀಟ್ ಮಾಡಿರುವ ಉದ್ಯಮಿ ಟಿ.ವಿ. ಮೋಹನ್ದಾಸ್ ಪೈ, ‘ಸುಂದರವಾದ ನಮ್ಮ ಬೆಂಗಳೂರನ್ನು ಭ್ರಷ್ಟ ಬಿಬಿಎಂಪಿ ಆಳುತ್ತಿರುವ ಪರಿ ಇದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಅವರು, ‘ಸರ್ ದಯವಿಟ್ಟು ಈ ಫೋಟೊ ನೋಡಿ, ಮಳೆಯ ನೀರನ್ನು ಕಳುಹಿಸುವುದಕ್ಕಾಗಿ ಒಳಚರಂಡಿ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.
ವ್ಯಕ್ತಿಯೊಬ್ಬರು ಒಳಚರಂಡಿ ವ್ಯವಸ್ಥೆಯ ಮ್ಯಾನ್ ಹೋಲ್ಗೆ ತೂತು ಕೊರೆದು ಮಳೆ ನೀರು ಸರಾಗವಾಗಿ ಸಾಗಲು ಅನುವು ಮಾಡಿಕೊಡುತ್ತಿರುವ ಫೋಟೊ ಒಂದನ್ನು ತಮ್ಮ ಟ್ವೀಟ್ ಜತೆ ಪೈ ಹಂಚಿಕೊಂಡಿದ್ದಾರೆ.
‘ಭ್ರಷ್ಟ ಬಿಜೆಪಿ ಎನ್ನಿ’: ಪೈ ಟ್ವೀಟ್ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ಭ್ರಷ್ಟ ಬಿಬಿಎಂಪಿ ಎನ್ನಬೇಡಿ, ಭ್ರಷ್ಟ ಬಿಜೆಪಿ ಎಂದು ಹೇಳಬೇಕು’ ಎಂದರು.
‘ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ ಸರ್ಕಾರ. ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಯೇ ಹೊಂದಿದ್ದಾರೆ. ನಗರದ ಸಚಿವರು ಅನುದಾನ ಲೂಟಿ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.