ಬೆಂಗಳೂರು: ‘ಲಕ್ಷಣ ಇಲ್ಲದ ಸೋಂಕಿತರನ್ನು ದಾಖಲಿಸಿಕೊಂಡು ಲಕ್ಷಣ ಇರುವ ಸೋಂಕಿತರಿಗೆ ಹಾಸಿಗೆ ಸಿಗದಂತೆ ಮಾಡಬಾರದು’ ಎಂದು ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
‘ಬಿಬಿಎಂಪಿ ಅಧಿಕಾರಿಗಳು ಕಳುಹಿಸಿಕೊಡುವ ಸೋಂಕಿತರಿಗೆ ಅವಕಾಶ ನಿರಾಕರಿಸಬಾರದು. ಈ ಆದೇಶ ಭಾನುವಾರದಿಂದಲೇ ಜಾರಿಗೆ ಬರಲಿದೆ’ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.
‘ಹಾಸಿಗೆ ಸಾಮರ್ಥ್ಯ, ಅದರಲ್ಲಿ ಸರ್ಕಾರದ ಕೋಟಾ ಸಂಖ್ಯೆ, ಅವುಗಳಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆ, ಖಾಲಿ ಇರುವ ಹಾಸಿಗೆಗಳ ಸಂಖ್ಯೆ ಎಷ್ಟು ಎಂಬುದನ್ನು ಬಿಬಿಎಂಪಿ ಮತ್ತು ಸಾಸ್ಥ್ (ಎಸ್ಎಎಸ್ಟಿ) ಪೋರ್ಟಲ್ನಲ್ಲಿ ಅಪ್ಡೇಟ್ ಮಾಡಬೇಕು’ ಎಂದು ಅವರು ವಿವರಿಸಿದ್ದಾರೆ.
‘ಹೈಕೋರ್ಟ್ ನಿರ್ದೇಶನದಂತೆ ಎಲ್ಲಾ ಆಸ್ಪತ್ರೆಗಳ ಫಲಕಗಳಲ್ಲಿ ಈ ಮಾಹಿತಿ ಪ್ರದರ್ಶಿಸಬೇಕು. ಹಾಸಿಗೆ ಖಾಲಿ ಇಲ್ಲದಿದ್ದರೆ ಸೋಂಕಿತರ ಸಂಬಂಧಿಕರು ಯಾರಿಗೆ ಅಹವಾಲು ಸಲ್ಲಿಸಬೇಕು ಎಂಬ ಮಾಹಿತಿಯೂ ಅದರಲ್ಲಿ ಇರಬೇಕು. ಸಂಬಂಧಪಟ್ಟ ಹಿರಿಯ ಅಧಿಕಾರಿ, ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನೂ ಫಲಕದಲ್ಲಿ ಹಾಕಬೇಕು. ಈ ನಿಯಮಗಳನ್ನು ಪಾಲಿಸದಿದ್ದರೆ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.