ಬೆಂಗಳೂರು: ನಗರದ ವಿವಿಧೆಡೆ ಪಟಾಕಿ ಅವಘಡಗಳು ಮುಂದುವರಿದಿದ್ದು, ಹಬ್ಬದ ಎರಡು ದಿನಗಳ ಅವಧಿಯಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಡಿದ್ದಾರೆ.
ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ನಾಲ್ವರು ಹಾಗೂ ಸೋಮವಾರ ಮೂವರು ಸೇರಿ ಒಟ್ಟು 8 ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇನ್ನಿಬ್ಬರಿಗೆ ಚಿಕಿತ್ಸೆ ಪ್ರಕ್ರಿಯೆ ನಡೆಯುತ್ತಿದೆ. ಹಬ್ಬಕ್ಕೂ ಮುನ್ನವೇ ಗಾಯಗೊಂಡು ದಾಖಲಾಗಿದ್ದ ಬಂಗಾರಪೇಟೆಯ 7 ವರ್ಷದ ಬಾಲಕ, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾನೆ. ಕಾರ್ನಿಯಾ ಸಮಸ್ಯೆ ಇರುವುದರಿಂದ ಎರಡು ವಾರಗಳ ನಂತರ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ ಒಟ್ಟು 25 ಮಂದಿ ಚಿಕಿತ್ಸೆ ಪಡೆದಿದ್ದು, ಇವರಲ್ಲಿ 13 ಮಂದಿಗೆ ಗಂಭೀರ ಗಾಯಗಳಾಗಿವೆ. ಇವರಲ್ಲಿ ಒಬ್ಬರು ಬಿಹಾರದವರಾಗಿದ್ದು, ಉಳಿದವರೆಲ್ಲ ನಗರದ ನಿವಾಸಿಗಳೇ ಆಗಿದ್ದಾರೆ. ಚಿಕಿತ್ಸೆ ಪಡೆದವರಲ್ಲಿ 13 ಮಂದಿ ಮಕ್ಕಳಾಗಿದ್ದು, ಎಲ್ಲರಿಗೂ ಹೊರ ರೋಗಿಗಳ ವಿಭಾಗದಲ್ಲಿಯೇ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.
ಪಟಾಕಿ ಅವಘಡದಿಂದ ಗಾಯಗೊಂಡವರಲ್ಲಿ ಶೇ 90 ರಷ್ಟು ಮಂದಿ ವೀಕ್ಷಕರಾಗಿದ್ದಾರೆ. ಪಟಾಕಿ ಹಚ್ಚದಿದ್ದರೂ, ಬಿಜಿಲಿ ಪಟಾಕಿ ಮತ್ತು ಲಕ್ಷ್ಮಿ ಬಾಂಬ್ ಕಿಡಿ ಸಿಡಿದು ಹೆಚ್ಚಿನವರು ಗಾಯಗೊಂಡಿದ್ದಾರೆ. ರಾಮಮೂರ್ತಿನಗರದಲ್ಲಿ ಮೂರು ವರ್ಷದ ಬಾಲಕನಿಗೆ ಸುರ್ ಸುರ್ ಕಡ್ಡಿ ಹಚ್ಚುವ ವೇಳೆ ಗಾಯವಾಗಿದೆ. ಈ ಬಾಲಕನಿಗೆ ಮಿಂಟೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.