ಬೆಂಗಳೂರು: ‘ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡದನಗರದ ನಾಲ್ಕುಪ್ರಮುಖ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶ ನೀಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
ನೃಪತುಂಗ ರಸ್ತೆಯ ಸೇಂಟ್ ಮಾರ್ಥಾಸ್, ಶಂಕರಪುರದ ರಂಗದೊರೈ, ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದರು.
‘ನಾಲ್ಕೈದು ಆಸ್ಪತ್ರೆಯವರು ಒಟ್ಟಾಗಿ ಬಂದು ಒಂದೆರಡು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆರೈಕೆಗೆ ಬಿಟ್ಟುಕೊಟ್ಟು ಉಳಿದ ಆಸ್ಪತ್ರೆಗಳನ್ನು ಸೋಂಕಿತರಲ್ಲದವರಿಗೆ ಬಳಕೆ ಮಾಡಿಕೊಳ್ಳಲು ನಮ್ಮ ಅಭ್ಯಂತರ ಇಲ್ಲ. ಒಟ್ಟಾರೆ ಸೋಂಕಿತರಿಗೆ ಹಾಸಿಗೆ ಸಿಗಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದರು.
‘ಕೆಲ ಆಸ್ಪತ್ರೆಗಳು ಹಾಸಿಗೆ ಸಾಮರ್ಥ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದವು. ನೋಟಿಸ್ ನೀಡಿದ ಬಳಿಕ ಸರಿಯಾದ ಮಾಹಿತಿ ನೀಡುತ್ತಿವೆ’ ಎಂದೂ ಅವರು ಹೇಳಿದರು.