ಬೆಂಗಳೂರು: ವಾಹನ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಕಬ್ಬನ್ ಉದ್ಯಾನದಲ್ಲಿ ವಾಹನಗಳ ಸಂಚಾರಕ್ಕೆ ಬುಧವಾರದಿಂದ ಅನುಮತಿ ನೀಡಲಾಯಿತು.
ಕೊರೊನಾ ಕಾರಣಕ್ಕೆ ಉದ್ಯಾನದ ಪ್ರವೇಶದ್ವಾರಗಳನ್ನು ಮುಚ್ಚಿ, ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪರಿಸರವಾದಿಗಳು ಹಾಗೂ ವಾಯುವಿಹಾರಿಗಳು ವಾಹನ ಸಂಚಾರ ಸಂಪೂರ್ಣ ನಿಷೇಧಿಸುವಂತೆ ಮೌನ ಪ್ರತಿಭಟನೆ ನಡೆಸುತ್ತಿದ್ದರು.
ವಾಹನ ಸಂಚಾರ ನಿರ್ಬಂಧಿಸುವಂತೆಪಾಲಿಕೆ, ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಸರ್ಕಾರಕ್ಕೆ ಮನವಿ ಮಾಡಿದ್ದರು.ಆದರೆ, ವಾಹನ ದಟ್ಟಣೆ ತಗ್ಗಿಸಲು ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡುವಂತೆ ಸಂಚಾರ ಪೊಲೀಸರು ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದ್ದರು.
'ಸರ್ಕಾರದ ಸೂಚನೆ ಮೇರೆಗೆ ಉದ್ಯಾನದಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ' ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್) ಗುಣವಂತ ತಿಳಿಸಿದ್ದಾರೆ.