ಬೇಂದ್ರೆ ಅವರ ಸೃಜನಶೀಲತೆಯು ವರ್ತಮಾನಕ್ಕೆ ಅನುಗುಣವಾದ ಭಾಷೆ ಮತ್ತು ಶೈಲಿಯನ್ನು ಸೃಷ್ಟಿಸಿತು ಎನ್ನುವುದು ಮಹತ್ವದ ವಿಚಾರ. ಈ ಕವಿಗೆ ಗಂಡು–ಹೆಣ್ಣು, ಪ್ರಕೃತಿ–ಪುರುಷ, ಎರಡು ಬಹುಮುಖ್ಯ ದ್ರವ್ಯಗಳಾಗಿವೆ. ಇವುಗಳ ತೀವ್ರ ಪ್ರೀತಿಯ ಸಾಹಚರ್ಯದಲ್ಲಿಯೇ ಸೃಜನಶೀಲತೆಯ ಉಗಮ ಎನ್ನುವುದು ಕವಿಯ ಗಟ್ಟಿಯಾದ ನಂಬಿಕೆ. ಅವರ ಕಾವ್ಯದಲ್ಲಿ ‘ಭೃಂಗ’ ಇಂಥ ತಾತ್ವಿಕತೆಯನ್ನು ಹಿಡಿಯುವ ಮುಖ್ಯವಾದ ಪ್ರತಿಮೆಯಾಗಿದೆ. ಬೇಂದ್ರೆಯವರ ಕವನಗಳಲ್ಲಿ ಭೃಂಗ ಒಂದು ಸಂಕೀರ್ಣ ಪ್ರತಿಮೆಯಾಗಿ ಹೇಗೆ ರೂಪುಗೊಂಡಿತು ಎಂಬುದನ್ನು ಕಲ್ಗುಡಿ ಅವರು ಕೆದಕಲಿದ್ದಾರೆ.