ಬೆಂಗಳೂರು: ನಗರದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ 12 ರಸ್ತೆಗಳಲ್ಲಿ ಸಾರ್ವಜನಿಕ ಬಸ್ ಸಂಚಾರಕ್ಕಾಗಿಯೇ ಪ್ರತ್ಯೇಕ ಪಥವನ್ನು ಕಾಯ್ದಿರಿಸಲು ಸಿದ್ಧತೆ ನಡೆದಿದೆ.
ನಗರದಲ್ಲಿ ತ್ವರಿತ ಬಸ್ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಬಿಬಿಎಂಪಿ, ಬಿಎಂಟಿಸಿ, ಭೂಸಾರಿಗೆ ನಿರ್ದೇಶ ನಾಲಯ (ಡಲ್ಟ್) ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಭಾನುವಾರ ಸ್ಥಳ ಪರಿಶೀಲನೆ ನಡೆಸಿದರು.
‘ಈ ಯೋಜನೆಯನ್ನು ಪ್ರಾಯೋಗಿಕ ವಾಗಿ ಜಾರಿಗೆ ತರಲಿದ್ದೇವೆ. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನವೆಂಬರ್ 1ರಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘12 ರಸ್ತೆಗಳ ಪೈಕಿ ನಿತ್ಯವು ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ಸಿಲ್ಕ್ಬೋರ್ಡ್–ಕೆ.ಆರ್.ಪುರ ನಡು ವಿನ 17 ಕಿ.ಮೀ ಉದ್ದದ ರಸ್ತೆಯಲ್ಲಿ ಬಸ್ ಸಂಚಾರಕ್ಕಾಗಿ ಪ್ರತ್ಯೇಕ ಪಥವನ್ನು ಜಾರಿಗೆ ತರಲಿದ್ದೇವೆ. ಇದರ ಯಶಸ್ಸನ್ನು ಆಧರಿಸಿ ಉಳಿದ 11 ರಸ್ತೆಗಳಲ್ಲೂ ಬಸ್ ಗಳಿಗೆ ಪ್ರತ್ಯೇಕ ಪಥ ನಿಗದಿಪಡಿಸುತ್ತೇವೆ’ ಎಂದು ಅನಿಲ್ ಕುಮಾರ್ ತಿಳಿಸಿದರು.
‘ಇರುವ ರಸ್ತೆಯಲ್ಲೇ 3.5 ಮೀ ಅಗಲದ ಪಥವನ್ನು ಬಸ್ಗಾಗಿ ಕಾಯ್ದಿರಿಸುತ್ತೇವೆ. ಈ ರಸ್ತೆಯಲ್ಲಿ ಇನ್ನೆರಡು ಪಥ ಗಳನ್ನು ಇತರ ವಾಹನಗಳ ಸಂಚಾರಕ್ಕೆ ಬಳಸಬಹುದು. ಕಾಯ್ದಿರಿಸಿದ ಪಥದಲ್ಲಿ ಬಸ್ ಹಾಗೂ ಆಂಬುಲೆನ್ಸ್ ಹೊರತಾಗಿ ಅನ್ಯವಾಹನಗಳಿಗೆ ಪ್ರವೇಶ ಇಲ್ಲದ ಕಾರಣ, ಇಲ್ಲಿ ಬಸ್ಗಳ ಸರಾಸರಿ ವೇಗ ಹೆಚ್ಚಳವಾಗಲಿದೆ’ ಎಂದರು.
‘ಹೊರವರ್ತುಲ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಇದರಿಂದ ಬಸ್ ಪ್ರಯಾ ಣಿಕರಿಗೆ ಅನುಕೂಲವಾಗಲಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ’ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತ್ಯೇಕ ಪಥದ ಯೋಜನೆ ಸ್ವಾಗತಾ ರ್ಹ. ಇದು ಜಾರಿಗೊಂಡರೆ ಹೆಚ್ಚು ಮಂದಿ ಬಸ್ ಪ್ರಯಾಣವನ್ನು ನೆಚ್ಚಿಕೊಳ್ಳಲಿದ್ದು, ದಟ್ಟಣೆ ತಗ್ಗಲಿದೆ’ ಎಂದು ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಎಲ್ಲೆಲ್ಲಿ ಪ್ರತ್ಯೇಕ ಪಥ?
ಟ್ರಿನಿಟಿ ವೃತ್ತದಿಂದ ಆರಂಭವಾಗುವ ಪ್ರತ್ಯೇಕ ಬಸ್ ಪಥ ಹಲಸೂರಿನ ಗುರುದ್ವಾರ, ಫಿಲಿಪ್ಸ್ ಸಿಗ್ನಲ್ ಜಂಕ್ಷನ್, ಹಳೆ ಮದ್ರಾಸ್ ರಸ್ತೆ, ಇಂದಿರಾ ನಗರ 100 ಅಡಿ ರಸ್ತೆ, ಕಸ್ತೂರಿನಗರ ಜಂಕ್ಷನ್, ಕೆ. ಆರ್. ಪುರ, ಬೆನ್ನಿಗಾನಹಳ್ಳಿ ಸೇತುವೆ, ಮಾರತಹಳ್ಳಿ, ಎಚ್ಎಸ್ಆರ್ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಹೊಸೂರು ರಸ್ತೆ, ಆನೆಪಾಳ್ಯ ಜಂಕ್ಷನ್ ಮತ್ತು ಫೋರಂ ಮಾಲ್ ತನಕ ಇರಲಿದೆ.
ದಟ್ಟಣೆಯಿರುವ ರಸ್ತೆಗಳು
* ಹೊರವರ್ತುಲ ರಸ್ತೆ
* ಸರ್ಜಾಪುರ ರಸ್ತೆ
* ತುಮಕೂರು ರಸ್ತೆ
* ಹಳೆ ಮದ್ರಾಸ್ ರಸ್ತೆ
* ಬಳ್ಳಾರಿ ರಸ್ತೆ
* ಹಳೆ ವಿಮಾನನಿಲ್ದಾಣ ರಸ್ತೆ
* ಬನ್ನೇರುಘಟ್ಟ ರಸ್ತೆ
* ಕನಕಪುರ ರಸ್ತೆ
* ಮಾಗಡಿ ರಸ್ತೆ
* ಪಶ್ಚಿಮಕಾರ್ಡ್ ರಸ್ತೆ
* ಹೊಸೂರು ರಸ್ತೆ
* ಮೈಸೂರು ರಸ್ತೆ
ಸ್ವಾಗತಾರ್ಹ ಪ್ರಯತ್ನ: ಬಸ್ ಪ್ರಯಾಣಿಕರ ವೇದಿಕೆ
‘ಬಸ್ಗೆ ಪ್ರತ್ಯೇಕ ಪಥವನ್ನು ಹೊಂದುವ ಯೋಜನೆ ಸ್ವಾಗತಾರ್ಹ. ಇದು ಜಾರಿಗೊಂಡರೆ ಹೆಚ್ಚು ಮಂದಿ ಬಸ್ ಪ್ರಯಾಣವನ್ನು ನೆಚ್ಚಿಕೊಳ್ಳಲಿದ್ದು, ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ತಗ್ಗಲಿದೆ’ ಎಂದು ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.
‘ಬೇರೆ ಬೇರೆ ನಗರಗಳಲ್ಲಿ ಈ ಯೋಜನೆಯನ್ನು ಯಾವ ರೀತಿ ಜಾರಿಗೊಳಿಸಲಾಗಿದೆ ಎಂದು ಅಧ್ಯಯುನ ಮಾಡಬೇಕು. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಕಾರ್ಯಯೋಜನೆ ತಯಾರಿಸಬೇಕು’ ಎಂದು ಅವರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.