ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ವಿಳಂಬದಿಂದ ಮಳೆ ಹಾನಿ: ಅಸಮಾಧಾನ

ಮಳೆ ಹಾನಿ: ಮೇಯರ್‌ ನೇತೃತ್ವದಲ್ಲಿ ಸಭೆ * ರಸ್ತೆ ಗುಂಡಿ ಈಗಲೇ ಮಚ್ಚುವಂತೆ ಸೂಚನೆ
Last Updated 2 ಮೇ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿನ ಕೆಲವು ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು, ಮಳೆ ಬಂದಾಗ ಇಂತಹ ಕಡೆಯೇ ಹೆಚ್ಚಾಗಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಮೇಯರ್‌ ಗಂಗಾಂಬಿಕೆ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಸುರಿದ ಮಳೆಗೆ ಕೆಲವು ತಗ್ಗು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಹಾಗೂ ಉಪಮೇಯರ್‌ ಭದ್ರೇಗೌಡ ಅವರು ಗುರುವಾರಪಾಲಿಕೆಯ ಎಂಟು ವಲಯಗಳ ಮುಖ್ಯ ಎಂಜಿನಿಯರ್‌ಗಳ ಜೊತೆ ಸಭೆ ನಡೆಸಿದರು. ಮಳೆ ಹಾನಿ ತಡೆಯಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಕಾಮಗಾರಿ ವಿಳಂಬದಿಂದಾಗಿ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ತುರ್ತು ಸ್ಪಂದನಾ ತಂಡಗಳನ್ನು ರಚಿಸಿಕೊಂಡು ಅನಾಹುತಗಳನ್ನು ತಡೆಗಟ್ಟಬೇಕು. ರಾಜಕಾಲುವೆಗಳು ಮತ್ತು ಮೋರಿಗಳಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಬೇಕು’ ಎಂದು ಮೇಯರ್‌ ಸೂಚಿಸಿದರು.

‘ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಅವುಗಳಲ್ಲಿನ ಹೂಳನ್ನು ತೆಗೆದು ರಸ್ತೆ ಬದಿಯಲ್ಲೇ ಬಿಡಲಾಗುತ್ತಿದೆ ಎಂಬ ದೂರುಗಳಿವೆ. ಮಳೆ ಬಂದರೆ ಅದು ಮತ್ತೆ ಚರಂಡಿಯನ್ನು ಸೇರುತ್ತದೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ತಕ್ಷಣವೇ ಅದನ್ನು ತೆರವುಗೊಳಿಸಿ’ ಎಂದು ಆದೇಶ ಮಾಡಿದರು.

‘ಡಾಂಬರು ರಸ್ತೆಗಳಲ್ಲಿರುವ ಗುಂಡಿಗಳನ್ನು ಪತ್ತೆ ಹಚ್ಚಿಮಳೆಗಾಲಕ್ಕೆ ಮುನ್ನವೇ ಮುಚ್ಚಬೇಕು. ಇದರಿಂದ ಮಳೆಗಾಲದಲ್ಲಿ ರಸ್ತೆಗುಂಡಿಯಿಂದ ಅನಾಹುತ ಆಗದಂತೆ ತಡೆಯಬಹುದು’ ಎಂದು ಅವರು ಸಲಹೆ ನಿಡಿದರು.

‘ಉಪವಿಭಾಗಗಳಲ್ಲಿ 64 ಕಡೆ ಸ್ಥಾಪಿಸಿರುವ ನಿಯಂತ್ರಣಾ ಕೊಠಡಿಗಳ ಜೊತೆ ಸತತ ಸಂಪರ್ಕ ಇಟ್ಟುಕೊಂಡು ಅನಾಹುತ ಸಂಭವಿಸದಂತೆ, ನಿಗಾ ವಹಿಸಬೇಕು. ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ ಅಧಿಕಾರಿಗಳೊಂದಿಗೆ ಸಮನ್ವಯದ ಕೊರತೆ ಇದೆ. ಇದಕ್ಕೆ ಆಸ್ಪದ ನೀಡಬಾರದು’ ಎಂದರು.

‘ಪಾಲಿಕೆ ವ್ಯಾಪ್ತಿಯಲ್ಲಿ 182 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಹಾನಿಯ ಸುಳಿವು ಸಿಕ್ಕಲ್ಲಿ ಸರ್ಕಾರದ ಇತರ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಂದ ದೂರು ಬಂದರೆ, ಸಮಸ್ಯೆ ಬಗೆಹರಿಸಲು ತಕ್ಷಣವೇ ಕಾರ್ಯೋನ್ಮುಖರಾಗಬೇಕು. ತುರ್ತು ಕಾಮಗಾರಿಗಳಿಗೆ ವಾರ್ಡ್‍ಗಳಲ್ಲಿ ಅಭಿವೃದ್ಧಿ ಅನುದಾನ ಬಳಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT