‘ರಾಜ್ಯದಲ್ಲಿ 8 ಸಾವಿರ ಮಂದಿ ಎಚ್ಐವಿ ಪೀಡಿತ ಲೈಂಗಿಕ ಕಾರ್ಯಕರ್ತೆಯರಿದ್ದು, ಅವರೆಲ್ಲಾ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಅತ್ಯಾಚಾರಕ್ಕೊಳಪಟ್ಟವರು, ಅಪ್ರಾಪ್ತರು, ಎಚ್ಐವಿ ಪೀಡಿತರು ಹಾಗೂ 45 ವರ್ಷ ಮೇಲ್ಪಟ್ಟವರೂ ಇದ್ದಾರೆ. ಅವರನ್ನು ಆದ್ಯತೆಯ ಮೇರೆಗೆ ಈ ವೃತ್ತಿಯಿಂದ ಹೊರಗಿಡಬೇಕು. ವೃತ್ತಿ ಕೌಶಲ ಗಳಿಸಲು ಅಗತ್ಯವಿರುವ ತರಬೇತಿ, ಶಿಕ್ಷಣ ಒದಗಿಸಬೇಕು. ಸಾಮರ್ಥ್ಯ ವೃದ್ಧಿಸುವ ಕೆಲಸವೂ ಆಗಬೇಕು. ತರಬೇತಿ ಅವಧಿಯಲ್ಲಿ ದಿನಕ್ಕೆ ₹300 ಗೌರವ ಧನ ನೀಡಬೇಕು. ಕಾಂಡೋಮ್ ಬಳಸುವುದಾಗಿ ಅನೇಕರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದು ಪಾಲನೆಯೇ ಆಗುತ್ತಿಲ್ಲ. 2,600 ಮಂದಿ ನಿಯಮಿತವಾಗಿ ಎಚ್ಐವಿ ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ ಎಂದೂ ವರದಿಗಳು ಹೇಳುತ್ತವೆ. ಹೀಗಿದ್ದರೂ ಏಡ್ಸ್ ನಿಯಂತ್ರಣ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.