ಬೆಂಗಳೂರು: ಚಿಕ್ಕಮಕ್ಕಳಲ್ಲೂ ಸಕ್ಕರೆ ಕಾಯಿಲೆಯು ಕಾಣಿಸಿಕೊಳ್ಳುತ್ತಿದೆ ಎಂದು ಅಹಮದಾಬಾದ್ನ ಆರ್ಎಸ್ಎಸ್ಡಿಐ ಮಾಜಿ ಅಧ್ಯಕ್ಷ ಡಾ. ಬನ್ಸಿ ಸಾಬ್ ಅವರು ಆತಂಕ ವ್ಯಕ್ತಪಡಿಸಿದರು.
ಬಸವೇಶ್ವರನಗರದ ಡಾ.ಅರವಿಂದ ಡಯಾಬಿಟೀಸ್ ಸೆಂಟರ್ ಏರ್ಪಡಿಸಿದ್ದ ಸಕ್ಕರೆ ಕಾಯಿಲೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಸಕ್ಕರೆ ಕಾಯಿಲೆ ಕ್ಷಿಪ್ತಗತಿಯಲ್ಲಿ ಹೆಚ್ಚುತ್ತಿದೆ. ಮಿತ ಆಹಾರ, ನಿಯಮಿತ ವ್ಯಾಯಾಮ, ತೂಕ ಇಳಿಸುವುದು, ಕುರುಕಲು ತಿಂಡಿಗೆ ಕಡಿವಾಣ ಸಕ್ಕರೆ ಕಾಯಿಲೆ ತಡೆಗೆ ಉತ್ತಮ ವಿಧಾನ ಎಂದು ಸಲಹೆ ನೀಡಿದರು.
ಚಿಕ್ಕಮಕ್ಕಳಲ್ಲಿ ಸಕ್ಕರೆ ಕಾಯಿಲೆ ಕಾಣಿಸಿಕೊಂಡಾಗ ಪಾಲಕರು ಮಗುವಿನ ಆಹಾರ ಪದ್ಧತಿ ಹಾಗೂ ಬೆಳವಣಿಗೆ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಸೂಕ್ತವಾಗಿದೆ ಎಂದು ತಿಳಿಸಿದರು.
ಅರವಿಂದ್ ಡಯಾಬಿಟೀಸ್ ಸೆಂಟರ್ನ ಅಧ್ಯಕ್ಷ ಡಾ.ಅರವಿಂದ ಜಗದೀಶ್ ಮಾತನಾಡಿ, ‘ಸಂಸ್ಥೆ ಕೆಲವು ವರ್ಷಗಳಿಂದ ರಾಷ್ಟ್ರೀಯ ಸಮ್ಮೇಳನದ ಮೂಲಕ ಈ ಕಾಯಿಲೆ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಸಕ್ಕರೆ ಕಾಯಿಲೆ ತಡೆಗೆ ಹೊಸಹೊಸ ಆವಿಷ್ಕಾರಗಳನ್ನು ತಿಳಿಸುವುದು ಸೆಂಟರ್ನ ಉದ್ದೇಶ’ ಎಂದು ಹೇಳಿದರು.